ಧಾರವಾಡ prajakiran.com :
ಸಾವಿತ್ರಿಬಾಯಿ ಪುಲೆ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಿಸುವಂತೆ ಕೋರಿ ಶಿಕ್ಷಣ ಸಚಿವ ಸುರೇಶಕುಮಾರ್ ಅವರಿಗೆ
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯ ಘಟಕ ಮನವಿ ಮಾಡಿದೆ.
ಈ ಹಿಂದೆ ತಮ್ಮ ಮನವಿ ಮೇರೆಗೆ ಜನವರಿ 3 ರಂದು ಮಾತೇ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆಯನ್ನು ಪ್ರತಿವರ್ಷ ಎಲ್ಲಾ ಶಾಲೆಗಳಲ್ಲಿ ಆಚರಿಸುವಂತೆ ಆದೇಶವನ್ನು ಹೊರಡಿಸಿರುವಿರಿ. ಅದಕ್ಕಾಗಿ ಸಮಸ್ತ ಕರ್ನಾಟಕದ ಎಲ್ಲಾ ಶಿಕ್ಷಕಿಯರು ತಮಗೆ ಚಿರಋಣಿಯಾಗಿದ್ದೇವೆ.
ಮಾತೆ ಸಾವಿತ್ರಿಬಾಯಿ ಫುಲೆಯವರು ಬ್ರಿಟಿಷರಿಂದಲೇ ಭಾರತದ ಪ್ರಥಮ ಶಿಕ್ಷಕಿ ಎನ್ನುವಂತಹ ಬಿರುದನ್ನು ಪಡೆದಿರುವ ಅಕ್ಷರದವ್ವ ರಾಗಿದ್ದಾರೆ.
ಸ್ವತಂತ್ರ ಪೂರ್ವದಲ್ಲಿ ಮಹಿಳಾ ಸಮಾನತೆ, ಸ್ತ್ರೀ ಶಿಕ್ಷಣ, ಬಾಲ್ಯವಿವಾಹ ಖಂಡನೆ,ವಿಧವಾ ಪುನರ್ವಿವಾಹ ,ಮಹಿಳಾ ಮೀಸಲಾತಿ ,ಸ್ತ್ರೀಯು ಸರ್ವಕಾರ್ಯಗಳಲ್ಲಿ ,ಸ್ವತಂತ್ರವಾಗಿ ಮುನ್ನುಗ್ಗಲು ಬೇಕಾಗಿರುವಂತಹ ಧೈರ್ಯವನ್ನು ಶಿಕ್ಷಣದ ಮೂಲಕ ನೀಡಿದರೆ ಮಾತ್ರ ಸಾಧ್ಯವಾಗುತ್ತದೆ.
ಪತಿಯೊಡನೆ ಬೆರೆತು ಸಮಾಜದ ಎಲ್ಲಾ ಕಾರ್ಯಕ್ರಮದಲ್ಲಿ ಸ್ತ್ರೀಯು ಭಾಗವಹಿಸಬೇಕೆಂದು, ಅಂದು ಹೋರಾಡಿದ ವೀರ ಮಹಿಳೆ.
ಶಿಕ್ಷಕಿಯರಿಗೆ ಇಂದಿಗೂ ಸಹ ಎಷ್ಟೊಂದು ಮಾನಸಿಕ ಕಿರುಕುಳ ದೌರ್ಜನ್ಯಗಳು ನಡೆಯುತ್ತಿವೆ. ಆದರೆ ಪುರಾತನ ಕಾಲದಲ್ಲಿ ಎಲ್ಲವನ್ನು ಮೆಟ್ಟಿ ನಿಂತು ಶಿಕ್ಷಕಿಯಾಗಿ ಉತ್ತುಂಗ ಸ್ಥಾನಕ್ಕೇರಿದ ಮಹಿಳೆ ಸಾವಿತ್ರಿಬಾಯಿ ಫುಲೆಯವರು.
ಮಹಿಳಾ ಶಿಕ್ಷಣ ಎನ್ನುವುದು ದೂರದ ಕನಸು ಆಗಿದ್ದ ಹೊತ್ತಿನಲ್ಲಿ, ಬಾಲ್ಯವಿವಾಹ ಉತ್ತುಂಗದಲ್ಲಿದ್ದ ಕಾಲದಲ್ಲಿ, ಬಾಲಕಿಯರಿಗಾಗಿ ಶಾಲೆ ತೆರೆದು ಸಮಾನತೆಯತ್ತ ಒಂದು ಹೆಜ್ಜೆ ಇಡುವುದನ್ನು ಮಾತೇ ಸಾವಿತ್ರಿಬಾಯಿ ಫುಲೆಯವರು ಕಲಿಸಿದರು.
ಶೋಷಿತರ ವಿಮೋಚನೆಯ ದಾರಿಗಳ ಹುಡುಕುತ್ತಾ, ಶಿಕ್ಷಣ ಸಂಘಟನೆ ಹೋರಾಟ ಗಳನ್ನು ಪ್ರತಿಪಾದಿಸಿದರು. ಸಾವಿತ್ರಿಬಾಯಿ ಎಂಬ ಸಾಮಾನ್ಯ ಮಹಿಳೆ ಅಸಾಧಾರಣ ಬದ್ಧತೆ ಕಷ್ಟಗಳನ್ನು, ಪ್ರದರ್ಶಿಸಿ ಭಾರತೀಯ ಮಹಿಳಾ ವಿಮೋಚನೆಯ ಮೈಲುಗಲ್ಲು ಹಾಗೂ ಶಿಕ್ಷಕಿಯರ ಸಂಘಟನೆಯ ಭದ್ರ ಬುನಾದಿಯಾದರು.
ಆದಕಾರಣ ಘನ ಸರ್ಕಾರವು, ಜನವರಿ 3 ರಂದು ಆಚರಿಸಲ್ಪಡುತ್ತಿರುವ, ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನಾಚರಣೆಯನ್ನು ಶಿಕ್ಷಕಿಯರ ದಿನಾಚರಣೆ ಎಂದು ಆಚರಿಸಬೇಕಾಗಿ ಆದೇಶವನ್ನು ಹೊರಡಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಇದು ತಮ್ಮ ಘನ ಸರ್ಕಾರಕ್ಕೆ ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಆಚರಿಸುವ ಮೂಲಕ ಮಾತೆಗೊಂದು ನಮನವನ್ನು ಸಲ್ಲಿಸುವ ಸದಾವಕಾಶವನ್ನು ಕರ್ನಾಟಕದ ಸಮಸ್ತ ಶಿಕ್ಷಕಿಯರ ಬಳಗಕ್ಕೆ ಮಾಡಿಕೊಡಬೇಕೆಂದು ಕಳಕಳಿಯಿಂದ ವಿನಂತಿ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಬಿ ಆಗ್ರಹಿಸಿದರು.