ಬೆಳಗಾವಿ, ಗದಗ, ಧಾರವಾಡ ಜಿಲ್ಲೆಯಾದ್ಯಂತ ಭಾರೀ ಮಳೆ
ಬೆಳಗಾವಿ prajakiran.com : ಉತ್ತರಕರ್ನಾಟಕ ಜಿಲ್ಲೆಯ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯ ಜೀವನಾಡಿಗಳಾದ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ.
ಈ ಹಿನ್ನಲೆಯಲ್ಲಿ ಜಿಲ್ಲೆಯ ಸವದತ್ತಿ ತಾಲೂಕಿನ ನವೀಲು ತೀರ್ಥ ಡ್ಯಾಂ ನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ್ದರಿಂದ ಸವದತ್ತಿ ಮುನವಳ್ಳಿ ಸೇತುವೆ ಮುಳುಗಡೆಯಾಗಿದೆ.
ಅದೇ ರೀತಿ ಅವರಾದಿ-ಚಿಕ್ಕತಡಸಿ ಸಂಪರ್ಕ ಕಡಿತಗೊಂಡಿದೆ. ಇದು ಕೂಡ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯಾಗಿದೆ.
ಇನ್ನೂ ರಾಮದುರ್ಗದ ವೆಂಕಟೇಶ್ವರ ದೇಗುಲ ಕೂಡ ಜಲಾವೃತಗೊಂಡಿದೆ. ಇನ್ನೂ ಹೀಗೆ ನೀರಿನ ಮಟ್ಟ ಹೆಚ್ಚಳವಾದರೆ ದೇವಸ್ಥಾನ ಮುಳುಗಡೆ ಭೀತಿ ಎದುರಿಸುತ್ತಿದೆ.
ಇನ್ನೂ ಬೆಳಗಾವಿ ಜಿಲ್ಲೆಯ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಹಾಗೂ ಗದಗ ಜಿಲ್ಲೆಯ 25 ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆ ಭೀತಿಗೆ ಸಿಲುಕಿವೆ.
ಬೆಳಗಾವಿ, ಗದಗ, ಧಾರವಾಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆದಿದ್ದು, ನದಿ ಅಕ್ಕಪಕ್ಕದಲ್ಲಿನ ಮನೆ ತೆರವು ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಈ ಮೂರು ಜಿಲ್ಲೆಯಾದ್ಯಂತ ವರುಣನ ಆರ್ಭಟ ಹೆಚ್ಚಾಗಿದೆ. ನದಿ ನೀರಿನ ಹೊರ ಹರಿವು ಹೆಚ್ಚಳಗೊಂಡಿದೆ. ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶಗೊಂಡಿದೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.