ಧಾರವಾಡ prajakiran.com : ನಾಡಿನ ಪ್ರತಿಷ್ಠಿತ ಪ್ರಕಾಶನಗಳಲ್ಲಿ ಒಂದಾಗಿರುವ ಧಾರವಾಡದ ಸಮಾಜ ಪುಸ್ತಕಾಲಯದ ಮನೋಹರ ಘಾಣೇಕರ್ (83) ಗುರುವಾರ ಸಂಜೆ ವಿಧಿವಶರಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ ಪುತ್ರನ ಜೊತೆಗೆ ಬೈಲಹೊಂಗಲದಲ್ಲಿ ವಾಸವಾಗಿದ್ದರು.
ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ವಿಧಿವಶರಾಗಿದ್ದಾರೆ.
ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಲೇಖಕರ ಕೃತಿಗಳನ್ನು ಅವರು ತಮ್ಮ ಸಮಾಜ ಪುಸ್ತಕಾಲಯ ಪ್ರಕಾಶನದಿಂದ ಪ್ರಕಟಿಸಿದ್ದರು.
ಅವರ ತಮ್ಮ ರವೀಂದ್ರ ಘಾಣೇಕರ್ ಇತ್ತೀಚೆಗೆ ಅಕಾಲಿಕ ನಿಧನ ಹೊಂದಿದ್ದರು. ಅವರ ನಿಧನದ ಬೆನ್ನಲ್ಲೇ ಇವರು ಕೂಡಅವರತ್ತ ಹೆಜ್ಜೆ ಹಾಕಿರುವುದು ಕುಟುಂಬಸ್ಥರಿಗೆ ಹಾಗೂ ಸಾಹಿತ್ಯ ವಲಯಕ್ಕೆ ತುಂಬಲಾರದ ನಷ್ಟವಾಗಿದೆ.
ತಂದೆಯ ವೃತ್ತಿ ಮುಂದುವರೆಸಿ, ಪುಸ್ತಕ ಮಾರಾಟ ದಿಂದಲೇ ತಮ್ಮ ಬದುಕು ಕಟ್ಟಿಕೊಂಡ ಮನೋಹರ ಘಾಣೇಕರ್ ಅವರು ನಾಡಿನ ಹೆಸರಾಂತ ಸಾಹಿತಿಗಳಾದ ಬೀಚಿ, ಶಂ.ಬಾ. ಜೋಶಿ, ಆನಂದ ಕಂದ, ಮೊದಲಾದ ಖ್ಯಾತ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸಿದ್ದರು.
ಜೊತೆಗೆ ಇವರು ರೇಖಿ ಹಾಗೂ ಆಕ್ಯೂ ಪಂಕ್ಚರ ಚಿಕಿತ್ಸೆಯಲ್ಲಿ ಪರಿಣತರಾಗಿದ್ದರು. ಇಬ್ಬರು ಮಕ್ಕಳು, ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.