ಬೆಂಗಳೂರು prajakiran.com : ಡ್ರಗ್ಸ್ ಜಾಲದಲ್ಲಿ ಸಿಲುಕಿ ಬೆಂಗಳೂರಿನ ಕೇಂದ್ರ ಕಾರಾಗೃಹ (ಪರಪ್ಪನಅಗ್ರಹಾರ) ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 24ಕ್ಕೆ ಮುಂದೂಡಿಕೆಯಾಗಿದೆ.
ವಾದ ಪ್ರತಿವಾದ ಆಲಿಸಿದ ಬೆಂಗಳೂರಿನ ಎನ್ ಡಿ ಪಿ ಎಸ್ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.
ಸಿಸಿಬಿ ಪರ ವಾದ ಮಂಡಿಸಿದ ಸರಕಾರಿ ಅಭಿಯೋಜಕರು, ನಟಿ ರಾಗಿಣಿ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದರು.
ಅಲ್ಲದೆ, ಅವರು ಪ್ರಭಾವಿಯಾಗಿದ್ದು, ಶ್ರೀಮಂತರು, ಉದ್ಯಮಿಗಳು ಹಾಗೂ ರಾಜಕಾರಣಿಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ. ಈ ಪ್ರಕರಣದ ಏಳನೇ ಆರೋಪಿಗಳ ಜೊತೆಗೆ ನೇರ ಸಂಪರ್ಕದಲ್ಲಿದ್ದಾರೆ.
ಬ್ಯಾಂಕ್ ಮತ್ತು ಹಣಕಾಸು ವ್ಯವಹಾರ ಕುರಿತು ಇನ್ನು ಪತ್ತೆ ಹಚ್ಚಬೇಕಿದೆ. ಈಗಾಗಲೇ ಹಲವು ಡ್ರಗ್ಸ್ ಪೆಡ್ಲರ್ ಗಳು ನಾಪತ್ತೆಯಾಗಿದ್ದಾರೆ.
ಅವರ ಶೋಧ ಕಾರ್ಯಮಾಡಬೇಕಿದೆ. ಜಾಮೀನು ನೀಡಿದರೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ವಾದಿಸಿದರು.
ಜೊತೆಗೆ ಆಂಧ್ರ, ಗೋವಾ, ಮುಂಬೈ, ಪಂಜಾಬ್ ನಿಂದ ಡ್ರಗ್ಸ್ ತರಿಸಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸಿದ್ದಾರೆ.
ಜೊತೆಗೆ ಕ್ರಿಮಿನಲ್ ಗಳ ಜೊತೆಗೆ ನಂಟು ಹೊಂದಿದ್ದಾರೆ ಎಂದು ನ್ಯಾಯಾಧೀಶರ ಗಮನ ಸೆಳೆದಿದ್ದಾರೆ.
ಅಲ್ಲದೆ, ರಾಗಿಣಿ ಇನ್ನೊಂದಿಷ್ಟು ಜನರ ಹೆಸರು ಹೇಳಿದ್ದಾರೆ. ಅವರ ವಿಚಾರಣೆ ನಡೆಸಬೇಕಿದೆ. ಇವರು ಡ್ರಗ್ಸ್ ಜೊತೆಗೆ ನಂಟು ಹೊಂದಿಲ್ಲವೆಂದರೆ ಸಮಾಜಘಾತುಕ ವ್ಯಕ್ತಿಗಳ ಜೊತೆಗೆ ಸಂಪರ್ಕ ಹೊಂದಿದ್ದು ಯಾಕೆ.
ಸಿನಿಮಾ ಹಿರೋಯಿನ್ ಆಗಿರುವ ರಾಗಿಣಿ ತಮ್ಮ ಕರಾಳ ಮುಖ ಮುಚ್ಚಿಕೊಳ್ಳುವ ದುರುದ್ದೇಶದಿಂದ ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡಿದ್ದಾರೆ.
ಜಾಮೀನು ನೀಡಿದರೆ ತಲೆ ಮೆರೆಸಿಕೊಳ್ಳುವ ಸಾಧ್ಯತೆಗಳಿವೆ. ಜೊತೆಗೆ ಪ್ರಕರಣದ ಆರೋಪಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ವಾದ ಮಂಡಿಸಿದರು.
ಆರೋಪಿಗಳ ಜೊತೆಗೆ ಪದೇ ಪದೇ ವಾಟ್ಸಅಪ್ ಸಂದೇಶ ಕಳುಹಿಸಿದ್ದಾರೆ. ಈಮೇಲ್, ವಾಟ್ಸಪ್, ಮೊಬೈಲ್ ಮೂಲಕ ನಿರಂತರ ಸಂಪರ್ಕ ಹೊಂದಿದ್ದರು ಎಂದು ವಿವರಿಸಿದರು.
ಇದಕ್ಕೆ ತಕರಾರು ಸಲ್ಲಿಸಿದ ರಾಗಿಣಿ ಪರ ವಕೀಲರು, ಈ ಪ್ರಕರಣದಲ್ಲಿ ಪೊಲೀಸರು ಒಳಸಂಚು ರೂಪಿಸಿದ್ದಾರೆ. ಎಫ್ ಐ ಆರ್ ದಾಖಲಿಸುವ ಮುನ್ನವೇ ತನಿಖೆ ನಡೆಸಿದ್ದಾರೆ.
ಮನೆಯ ಮೇಲೆ ಸಿಸಿಬಿ ದಾಳಿ ನಡೆಸಿದಾಗ ಸಿಗರೇಟ್ ಸ್ಟ್ರಿಪ್ ಬಿಟ್ಟರೆ ಬೇರೆನೂ ಸಿಕ್ಕಿಲ್ಲ. ಪೊಲೀಸರು ಕಾನೂನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ವಾದಿಸಿದರು.
ಇದೇ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಜಾಮೀನು ಅರ್ಜಿ ಕೂಡ ಸೆ. 24ಕ್ಕೆ ವಿಚಾರಣೆ ಬರಲಿದೆ. ಸಿಸಿಬಿ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕೊಟ್ಟ ಹಿನ್ನಲೆಯಲ್ಲಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.
ಎನ್ ಡಿ ಪಿ ಎಸ್ ನ್ಯಾಯಾಲಯ ಈ ಮಹತ್ವದ ಆದೇಶ ಹೊರಡಿಸಿದೆ. ಹೀಗಾಗಿ ಇಬ್ಬರು ನಟಿಮಣಿಯರಿಗೆ ಸೆ. 24ರವರೆಗೆ ಜೈಲು ಗತಿ ಎಂಬಂತಾಗಿದೆ.