ಧಾರವಾಡ Prajakiran.com : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಧಾರವಾಡ ರೈಲ್ವೆ ನಿಲ್ದಾಣದ ಬಳಿ ರೈಲು ತಡೆಗೆ ಮುಂದಾದ ಹೋರಾಟಗಾರರನ್ನು ಧಾರವಾಡ ರೈಲ್ವೆ ಪೊಲೀಸರು ಬಂಧಿಸಿದ ಘಟನೆ ಗುರುವಾರ ನಡೆಯಿತು.
ಆರ್ ಕೆ ಎಸ್, ಎಐಟಿಯುಸಿ ಸೇರಿದಂತೆ ವಿವಿಧ ರೈತ ಸಂಘಟನೆಗಳ ಮುಖಂಡರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ರೈಲು ತಡೆಯಲು ಮುಂದಾಗಿದ್ದರು.
ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರತಿಭಟನಾಕಾರರನ್ನು ತಡೆದ ರೈಲ್ವೆ ಪೊಲೀಸರು ಅವರಿಗೆ ನಿಲ್ದಾಣದ ಒಳಗೂ ಪ್ರವೇಶ ನೀಡಲಿಲ್ಲ.
ಇದರಿಂದ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ತಳ್ಳಾಟ, ನೂಕಾಟ ನಡೆಯಿತು.
ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ನಂತರ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.
ಧಾರವಾಡದಲ್ಲಿ ನಡೆದ ರೈಲು ರೋಕೋ ಚಳುವಳಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕರಾದ ಬಿಎಸ್ ಸೊಪ್ಪಿನ್ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಲ್ಮೇಶ್ ಲಿಗಾಡೆ, ಆರ್ ಕೆ ಎಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ ಜಡಗಣ್ಣ ವರ, ಸಿ ಎಪ್ ಡಿ ರಾಜ್ಯ ಕಾರ್ಯದರ್ಶಿ ವೆಂಕನಗೌಡ ಪಾಟೀಲ್, ದಲಿತ ಸಂಘರ್ಷ ಸಮಿತಿ ಲಕ್ಷ್ಮಣ ದೊಡ್ಡಮನೆ, ರಾಜ್ಯ ರೈತ ಸಂಘ ಸುಭಾಷ್ ಕಲಕೇರಿ, ಆರ್ ಕೆ ಎಸ್ ಶರಣು ಗೋನವಾರ, ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಗಂಗಾಧರ್ ಬಡಿಗೇರ್, ಯುವಜನ ಸಂಘಟನೆಯ ಜಿಲ್ಲಾಧ್ಯಕ್ಷ ಭವಾನಿ ಶಂಕರ, ಹನುಮೇಶ್ ಹುಡೇದ್ ಮುಂತಾದವರು ಭಾಗವಹಿಸಿದ್ದರು.