ಧಾರವಾಡ prajakiran.com : ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಕೊಡ ಮಾಡುವ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಹ ಶಿಕ್ಷಕ-ಶಿಕ್ಷಕಿಯರು ಅಂತರ್ಜಾಲದ ಮೂಲಕ ಸ್ವಪ್ರಸ್ತಾವನೆಗಳ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಿದ್ದು, ಅರ್ಜಿ ಭರ್ತಿ ಮಾಡಲು ಜೂನ್ ೩೦ ಕೊನೆಯ ದಿನವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕದ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.
ಕೇಂದ್ರ ಸರಕಾರವು ರಾಷ್ಟ್ರ ಶಿಕ್ಷಕ ಪ್ರಶಸ್ತಿಗಳ ಅರ್ಜಿ ಸಲ್ಲಿಕೆಗಾಗಿಯೇ ರೂಪಿಸಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ಅಪೇಕ್ಷಿತವಾಗಿರುವ ಎಲ್ಲಾ ಸಂಗತಿಗಳ ಮಾಹಿತಿಗಳನ್ನು ಅಚ್ಚುಕಟ್ಟಾಗಿ ಪೂರಕ ದಾಖಲೆಗಳ ಸಮೇತ ಸಲ್ಲಿಸಬೇಕು.
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ರಾಷ್ಡ್ರ ಶಿಕ್ಷಕ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ಶಿಕ್ಷಕ-ಶಿಕ್ಷಕಿಯರು ತಮ್ಮ ಸೇವೆಯಲ್ಲಿ ಮಾಡಿರುವ ಕ್ರಿಯಾಪ್ರೇರಕ ಬೋಧನಾ ಸಾಧನೆಗಳ ಸಮಗ್ರ ಮಾಹಿತಿ ಮತ್ತು ದಾಖಲೆಗಳನ್ನು ವ್ಯವಸ್ಥಿತವಾಗಿ ಜಾಲತಾಣದಲ್ಲಿ ನಮೂದಿಸಬೇಕು.
ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪ್ರಸ್ತಾವನೆ ಸಲ್ಲಿಕೆಯ ಅಧಿಕೃತ ಜಾಲತಾಣದಲ್ಲಿ ಸ್ವಪ್ರಸ್ತಾವನೆಗಳನ್ನು ನಿಖರವಾಗಿ ದಾಖಲಿಸಲು ಹೆಚ್ಚಿನ ಮಾಹಿತಿಗಾಗಿ ವಾಯವ್ಯ ಕರ್ನಾಟಕ ವ್ಯಾಪ್ತಿಯ ಬಾಗಲಕೋಟ, ವಿಜಯಪೂರ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಗದಗ, ಹಾವೇರಿ, ಚಿಕ್ಕೋಡಿ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳ ಅರ್ಹ ಶಿಕ್ಷಕ-ಶಿಕ್ಷಕಿಯರು ಅಥವಾ ಮುಖ್ಯ ಶಿಕ್ಷಕರು ತಮ್ಮ ತಾಲೂಕಿನ ಬಿ.ಇ.ಓ. ಕಚೇರಿ ಇಲ್ಲವೇ ತಮ್ಮ ಜಿಲ್ಲೆಯ ಡಯಟ್ ಅಥವಾ ಡಿಡಿಪಿಐ ಕಚೇರಿಗಳಿಗೆ ತುರ್ತಾಗಿ ಭೇಟಿ ನೀಡಿ ಮಾರ್ಗದರ್ಶನ ಪಡೆಯಬೇಕೆಂದು ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.