ಧಾರವಾಡ prajakiran.com : ಧಾರವಾಡದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯದ ಕ್ರೀಡಾಪಟು ಪ್ರಿಯಾಂಕ ಓಲೇಕಾರ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ.
ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಕು. ಪ್ರೀಯಾಂಕಾ ಓಲೇಕಾರ ಆಸ್ಸಾಂನ ಗೌಹಾತಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ 800 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಮತ್ತು ಚಂಡಿಗಡದಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರಾಸ್ ಕಂಟ್ರಿ ಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದು ಕರ್ನಾಟಕಕ್ಕೆ ಮತ್ತು ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಧಾರವಾಡ ತಾಲೂಕಿನ ಮುಗಳಿ ಗ್ರಾಮದ ಪ್ರಿಯಾಂಕ, ಸದ್ಯ ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣ ಬಳಿಯ ಸರಕಾರಿ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಈಕೆಗೆ ಧಾರವಾಡ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷ ಮಹೇಶ ಶೆಟ್ಟಿ, ಉಪಾಧ್ಯಕ್ಷೆ ಶಕುಂತಲಾ ಬಿರಾದಾರ, ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಶಿವು ಹಿರೇಮಠ, ಹಿರಿಯ ನ್ಯಾಯವಾದಿ ಪಿ.ಹೆಚ್. ನೀರಲಕೇರಿ ಇನ್ನಿತರರು ಆರ್ಥಿಕ ನೆರವು ನೀಡಿದ್ದರು.
ಧಾರವಾಡ ಜಿಲ್ಲೆಯ ಯುವ ಜನಸೇವೆ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್ ಎಸ್., ಅಥ್ಲೆಟಿಕ್ಸ್ ತರಬೇತಿದಾರ ಶ್ಯಾಮಲಾ ಪಾಟೀಲ, ಅಥ್ಲೀಟ್ ರಾಜೇಶ್ವರಿ ಪಾಟೀಲ, ಸಂಸ್ಥೆಯ ಕೋಶಾಧ್ಯಕ್ಷ ಬಸವರಾಜ ತಾಳಿಕೋಟಿ, ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ಭೀಮಣ್ಣವರ ಹಾಗೂ ಇತರರು ಸಾಧನೆಗೈದ ಪ್ರಿಯಾಂಕಳನ್ನು ಅಭಿನಂದಿಸಿದ್ದಾರೆ.