ಧಾರವಾಡ prajakiran.com : ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ಪ್ರತಿವರ್ಷ ಕಾಮಣ್ಣ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಮೂರು ದಿನಗಳವರೆಗೆ ಸುತ್ತಮುತ್ತಲಿನ ಗ್ರಾಮಗಳ ಜನರು ಸೇರಿ ವಿಜೃಂಭಣೆಯಿಂದ ಕಾಮಣ್ಣನ ಹಬ್ಬ ಆಚರಿಸುತ್ತಾರೆ.
ಕೋವಿಡ್-19 ರ 2ನೇ ಅಲೆ ಆರಂಭವಾಗಿರುವುದರಿಂದ ಗುರುವಾರ ಸಂಜೆ (ಮಾ.25) ಧಾರವಾಡ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಸಂತೋಷ ಬಿರಾದಾರ ಅವರ ಅಧ್ಯಕ್ಷತೆಯಲ್ಲಿ ಹೋಳಿ ಹಬ್ಬದ ಆಚರಣೆ ಕುರಿತ ಪೂರ್ವಭಾವಿ ಸಭೆಯು ಮುಳಮುತ್ತಲ ಗ್ರಾಮಸ್ಥರು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಯೊಂದಿಗೆ ಜರುಗಿತು.
ಪ್ರತಿ ವರ್ಷದಂತೆ ಮುಳಮುತ್ತಲ ಕಾಮಣ್ಣ ದೇವರ ಮೂರ್ತಿ ಪ್ರತಿಷ್ಠಾಪನೆ ನಂತರ ಆಯೋಜಿಸುವ ಸಾಮೂಹಿಕ ಅನ್ನ ಪ್ರಸಾದ ವಿತರಣೆ, ಮೆರವಣಿಗೆ ಮಾಡದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಯಿತು.
ಸುತ್ತಲಿನ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮುಳಮುತ್ತಲ ಗ್ರಾಮಕ್ಕೆ ಆಗಮಿಸದಂತೆ ಹಾಗೂ ರಾಜ್ಯಸರ್ಕಾರವು ನೀಡಿರುವ ಕೋವಿಡ್-19 ರ ಸುರಕ್ಷತಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವಂತೆ ಆಯೋಜಕರಿಗೆ ತಹಶೀಲ್ದಾರ ತಿಳಿಸಿದರು.
ನಾಳೆಯಿಂದ ಮುಳಮುತ್ತಲ ಗ್ರಾಮದಲ್ಲಿ ಕೋವಿಡ್ ಮಾರ್ಗಸೂಚಿಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಹಶೀಲ್ದಾರ ಸೂಚಿಸಿದರು.
ಸಭೆಯಲ್ಲಿ ಪ್ರೊಬೇಷನರಿ ಎಸಿಗಳಾದ ಡಾ. ನಯನಾ ಎನ್., ರಾಘವೇಂದ್ರ ಜಗಲಾಸರ್, ಸಿಪಿಐ ಎಸ್.ಸಿ. ಪಾಟೀಲ, ಪ್ರೋಬೇಷನರಿ ತಹಶೀಲ್ದಾರ ಕಲಗೊಂಡ ಪಾಟೀಲ, ಗರಗ ಪಿಎಸ್ಐ ಕಿರಣ ಎಸ್. ಮೋಹಿತೆ, ಕಂದಾಯ ನಿರೀಕ್ಷಕ ಎಂ.ಎ. ಗೂಳಪ್ಪನವರ, ತಾಲೂಕಾ ಪಂಚಾಯತಿಯ ಸಿ.ಎಂ. ಹಳಣ್ಣವರ, ಮುಳಮುತ್ತಲ ಗ್ರಾಮಸ್ಥರಾದ ಪ್ರಕಾಶ ಮನಿಗಣಿ, ಗೂಳಪ್ಪ ಬಸಪ್ಪ ಬೆಂಡಿಗೇರಿ, ರವೀಂದ್ರ ಡೊಂಡನ್ನವರ, ಬಿ.ಬಿ. ಪಾಟೀಲ, ಎಸ್.ಕೆ. ಪೂಜಾರ, ಮಲ್ಲಪ್ಪ ನಿಂಬೋಜಿ, ರುದ್ರಪ್ಪ ಅರಿವಾಳ, ಜಿ.ಡಿ. ಗಾಣಿಗೇರ, ಎಂ.ಸಿ. ಹಿರೇಮಠ, ಹನುಮಂತ ದೊಂಡೆನ್ನವರ ಸೇರಿದಂತೆ ಇತರರು ಭಾಗವಹಿಸಿದ್ದರು.