ಬೆಂಗಳೂರು prajakiran. com ಮಾ. 28 :
ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಅವರು ಸುಸ್ಥಿರ ಗಣಿಗಾರಿಕೆಗೆ ಸಮಗ್ರ ಯೋಜನೆಯನ್ನು ರೂಪಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಅವರು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ಸುವರ್ಣ ಮಹೋತ್ಸವ ಕಾರ್ಯಾಗಾರ – 2022ರ ಉದ್ಘಾಟಿಸಿ ಮಾತನಾಡಿದರು.
ಗಣಿಗಾರಿಕೆಯಿಂದ ಪ್ರಕೃತಿಯ ಮೇಲಿನ ದಾಳಿಯನ್ನು ತಡೆಯಬೇಕು. ಮುಂದಿನ 50 ವರ್ಷಗಳ ಅವಧಿಯಲ್ಲಿ ಸುಸ್ಥಿರ ಗಣಿಗಾರಿಕೆಯಿಂದ ಹಂತಹಂತವಾಗಿ ಖನಿಜಗಳ ಬಳಕೆ ಹಾಗೂ ಅರಣ್ಯಗಳನ್ನು ಬೆಳೆಸುವ ಯೋಜನೆ ರೂಪಿಸಬೇಕು.
ಪರಿಸರ ಸಂರಕ್ಷಣೆಯ ಜೊತೆಜೊತೆಗೆ ಖನಿಜ, ಮರಳು,ಕಲ್ಲು, ಕಬ್ಬಿಣ ಅದಿರುಗಳ ಸಮತೋಲಿತ ಬಳಕೆ ಬಗ್ಗೆ ಗಮನಹರಿಸಬೇಕು. ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕ ರೀತಿಯಲ್ಲಿ ಗಣಿಗಾರಿಕೆ ಮಾಡಬೇಕು ಎಂದು ತಿಳಿಸಿದರು.
2022-23ರ ಆಯವ್ಯಯದಲ್ಲಿ ಅರಣ್ಯ ಜೀವಿಶಾಸ್ತ್ರ ವ್ಯವಸ್ಥೆಯ ಮೇಲೆ ಆಗಿರುವ ದಾಳಿಯ ದುಷ್ಪರಿಣಾಮವನ್ನು ಸರಿದೂಗಿಸಲು ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಹಸಿರು ಆಯವ್ಯಯವನ್ನು ರೂಪಿಸಿ 100 ಕೋಟಿ ರೂ. ಅನುದಾನವನ್ನ ಮೀಸಲಿಡಲಾಗಿದೆ ಎಂದು ತಿಳಿಸಿದರು.
ನಿಸರ್ಗ ಮತ್ತು ಮನುಷ್ಯ ಸೃಷ್ಟಿಯ ಭಾಗ. ಗಣಿಗಾರಿಕೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಈಗಿನ ತಂತ್ರಜ್ಞಾನದಿಂದ ಉಪಯುಕ್ತ ಸಂಪತ್ತಾಗಿ ಪರಿಣಮಿಸಿದೆ.
ಗಣಿಗಾರಿಕೆಗೆ ದೊಡ್ಡ ಇತಿಹಾಸವಿದೆ. ಹಿಂದಿನವರು ನಿಸರ್ಗದ ಗಣಿಸಂಪತ್ತನ್ನು ಉಳಿಸಿಕೊಂಡು ಬಂದಿದ್ದಾರೆ. ಭವಿಷ್ಯದ ಜನಾಂಗಕ್ಕೆ ಈ ಸಂಪತ್ತನ್ನು ಕಾಪಿಡಬೇಕಿದೆ.ಆದ್ದರಿಂದ ಸುಸ್ಥಿರ ಗಣಿಗಾರಿಕೆ ಹೆಚ್ಚು ಒತ್ತು ನೀಡಬೇಕು ಎಂದರು.
ಒರಿಸ್ಸಾ, ಜಾರ್ಖಂಡ್, ಪಶ್ಚಿಮ ಬಂಗಾಳದ ಪ್ರದೇಶದಲ್ಲಿ ಟಾಟಾಕಂಪನಿ ಮೈನ್ಸ್ ನವರು ಸುಸ್ಥಿರ ಗಣಿಗಾರಿಕೆ ಮಾಡಿ, ಆ ಪ್ರದೇಶವನ್ನು ಅರಣ್ಯೀಕರಣ ಮಾಡಿ ಪ್ರಕೃತಿಯನ್ನು ಸಂರಕ್ಷಿಸಲಾಗಿರುವ ನಿದರ್ಶನವನ್ನು ಮುಖ್ಯಮಂತ್ರಿಗಳು ನೀಡಿದರು.
ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಉತ್ತಮವಾಗಿ ಕಾರ್ಯನಿರ್ವಹಿಸಲು ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದು ತಿಳಿಸಿದರು.