ಹುಬ್ಬಳ್ಳಿ prajakiran.com : ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಚಟ್ನಳಿ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ನಿಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕೆಂದು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಮೇ.ಜಿ.ಎಮ್.ಶುಗರ್ ಮತ್ತು ಎನರ್ಜಿ ಪ್ರೈ ಲಿ. ಕಂಪನಿ ರಟ್ಟಿಹಳ್ಳಿ ತಾಲೂಕಿನ ಚಟ್ನಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಪರಿಣಾಮ ಸುಮಾರು 70 ಕ್ಕೂ ಹೆಚ್ಚು ಬಡ ರೈತರು ಉಳಿಮೆ ಮಾಡುತ್ತಿದ್ದ ಭೂಮಿಯನ್ನು ದೌರ್ಜನ್ಯದ ಮೂಲಕ ಸುಮಾರು 300 ಎಕರೆ ಕೂಡ್ಲಿ- ಶೃಂಗೇರಿ ಮಠದ ಇನಾಮ (ರದ್ದಾದ) ಭೂಮಿಯನ್ನು ಸಾಗುವಳಿ ಮಾಡುತ್ತಿದ್ದ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದೆ ಎಂದರು.
ಈಗಾಗಲೇ ಈ ಪ್ರಕರಣ ಕುರಿತು ಸಮಾನ ಮನಸ್ಕರ ಸಂಘಟನೆಗಳು ಸೇರಿಕೊಂಡು ಅ.11 ರಂದು ಹಾವೇರಿ ಜಿಲ್ಲಾಧಿಕಾರಿಗಳಿಗೆ, ಅ.16 ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಕೂಡಲೇ ಅಧಿಕಾರಿಗಳು ತಕ್ಷಣವಾಗಿ ಅಕ್ರಮ ಗಣಿಗಾರಿಕೆ ನಿಲ್ಲಿಸಿ, ತಪ್ಪಿತಸ್ಥ ಕಂಪನಿ ವಿರುದ್ಧ ದೂರು ದಾಖಲಿಸಕೊಂಡು ಅಕ್ರಮ ಗಣಿಗಾರಿಕೆಯಿಂದ ತೆಗೆದ ಕಲ್ಲು ಹಾಗೂ ಕ್ರಷರ್ ಗಳಿಂದ ತೆಗೆದ ಜಲ್ಲಿಯನ್ನು ಸರ್ಕಾರ ವಶಕ್ಕೆ ಪಡೆದು, ಅಕ್ರಮವಾಗಿ ಮಾರಾಟ ಮಾಡಲಾದ ಜಲ್ಲಿಯ ಮೌಲ್ಯದ ಜೊತೆಗೆ ದಂಡ ವಿಧಿಸಬೇಕು ಇಲ್ಲದೇ ಹೋದಲ್ಲಿ ಮುಂದಿನ ದಿನಮಾನಗಳಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎಲ್.ಪವಾರ್, ಎಮ್.ಸಿ.ಹಾವೇರಿ, ಎನ್.ಸಿ.ದೊಡ್ಡಮನಿ ಸೇರಿದಂತೆ ಮುಂತಾದವರು ಇದ್ದರು.
ಸಾಬರಮತಿ ಗಾಂಧಿ ಆಶ್ರಮವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ 1200 ಕೋಟಿ ಯೋಜನೆಯ ಮೂಲಕ ಅಭಿವೃದ್ಧಿಗೆ ಮುಂದಾದ ಸರ್ಕಾರಗಳ ನಡೆಯಿಂದ ಆಶ್ರಮದ ಪಾವಿತ್ರ್ಯಕ್ಕೆ ಹಾಗೂ ಘನತೆಗೆ ಕುಂದು ತರುವಂತಿದೆ. ಕೂಡಲೇ ಯೋಜನೆಯನ್ನು ಸರ್ಕಾರ ಕೈಬಿಡಬೇಕೆಂದು ಸಿಟಿಜನ ಫಾರ್ ಡೆಮಾಕ್ರಸಿ, ಜನಾಂದೋಲನಗಳ ಮಹಾಮೈತ್ರಿ, ಜೆಎಮ್ ಎಮ್ ಹಾಗೂ ಸಮಾನ ಮನಸ್ಕ ಸಂಘಟನೆಗಳು ಒತ್ತಾಯಿಸಿದೆ.