107 ವರ್ಷದ ಜಾತ್ರೆಗೆ ಬಿತ್ತು ಬ್ರೇಕ್”
ಧಾರವಾಡ prajakiran.com : ನಗರದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣ ಜಾತ್ರಾ ಮಹೋತ್ಸವ ಈ ಬಾರಿ ಸರಳ ರೀತಿಯಲ್ಲಿ ಆಚರಣೆಯಾಗುವ ಮೂಲಕ 107 ವರ್ಷದ ಸಂಪ್ರದಾಯಕ್ಕೆ ಈ ವರ್ಷ ಬ್ರೇಕ್ ಬೀಳಲಿದೆ.
ಹೌದು, ಇಂದಿಗೆ ಸರಿಯಾಗಿ ೧೦೭ ವರ್ಷಗಳಿಂದ ಇಲ್ಲಿನ ರವಿವಾರ ಪೇಟೆಯ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದ ದಸರಾ ಮಹೋತ್ಸವ ಕ್ಕೆ ಕರೋನಾ ಕರಿಛಾಯೆ ಆವರಿಸಿದ್ದು ಈ ಬಾರಿ ಅತ್ಯಂತ ಸರಳ ರೀತಿಯಲ್ಲಿ ಕೇವಲ ಸಾಂಪ್ರದಾಯಿಕ ಪೂಜೆಗೆ ಮಾತ್ರವೇ ಸೀಮಿತವಾಗಲಿದೆ.
ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ನವ ವಧುವಿನಂತೆ ತೋರುತ್ತಿದ್ದ ದೇವಸ್ಥಾನದಲ್ಲಿ ಈ ವರ್ಷ ಆ ಅಬ್ಬರವಿಲ್ಲ.
ಒಂಬತ್ತು ದಿನಗಳ ಕಾಲ ವಿಷ್ಣುವಿನ ೯ ಅವತಾರಗಳಿಗೆ ಜೀವ ತುಂಬುವ ಕಾರ್ಯ ನಡೆಯಲಿದ್ದು ಭಕ್ತಾದಿಗಳಿಗೆ ಹೊರಗಿನಿಂದ ಮಾತ್ರವೇ ದರ್ಶನವಕಾಶ ಕಲ್ಪಿಸಲಾಗಿದೆ.
ಸರಕಾರದ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಜಾತ್ರೆ ಉತ್ಸವಗಳನ್ನು ರದ್ದು ಮಾಡಿದ್ದು ಅದರಂತೆ ದೇವಸ್ಥಾನ ಸಮಿತಿ ಸಹ ನಿಯಮ ಪಾಲನೆ ಮಾಡುವತ್ತ ಗಮನ ಹರಿಸುವ ಮೂಲಕ ೧೦೭ ವರ್ಷ ಇತಿಹಾಸದ ಜಾತ್ರೆಯನ್ನು ಕೈ ಬಿಟ್ಟಿದೆ.
ಜಾತ್ರೆ ಅಲ್ಲ ಅದೊಂದು ನೆನಪು :
ಬೇರೆ ಊರುಗಳಲ್ಲಿ ನಡೆಯುವ ಜಾತ್ರೆಗೂ ಧಾರವಾಡದ ಶ್ರೀ ಲಕ್ಷ್ಮಿ ನಾರಾಯಣ ಜಾತ್ರೆಗೂ ಸಾಕಷ್ಟು ವ್ಯತ್ಯಾಸವಿದೆ.
ಇಲ್ಲಿ ಬೆಳೆದು ದೊಡ್ಡವರಾಗಿ ದೇಶ ಹಾಗೂ ವಿದೇಶಕ್ಕೆ ಹೋದವರು ದಸರೆಯಲ್ಲಿ ನೆನೆಯದೆ ಇರಲು ಸಾಧ್ಯವೇ ಇಲ್ಲ.
ಇನ್ನೂ ಕೆಲಸದ ನಿಮಿತ್ತ ಬೆಂಗಳೂರು ಸೇರಿದಂತೆ ದೇಶದ ವಿವಿಧ ಮಹಾನಗರ ಸೇರಿದ್ದ ಧಾರವಾಡಿಗರು ಈ ಮತ್ತೊಂದು ಸಲ ಜಾತ್ರೆಯಲ್ಲಿ ಪಾಲ್ಗೊಳ್ಳಲು ಉತ್ಸಕರಾಗಿದ್ದರು.
ಆದರೆ ಕರೋನಾ ನಿಯಂತ್ರಣ ಅನಿವಾರ್ಯವಾಗಿದ್ದರಿಂದ ಅವರಿಗೂ ಬೇಸರ ತರಿಸಿದೆ.
ಹೆಣ್ಣುಮಕ್ಕಳ ಅಚ್ಚುಮೆಚ್ಚು :
ಧಾರವಾಡದ ಮಟ್ಟಿಗೆ ಅತಿ ದೊಡ್ಡ ಜಾತ್ರೆ ಎನಿಸಿದ್ದ ಶ್ರೀ ಲಕ್ಷ್ಮಿ ನಾರಾಯಣ ಜಾತ್ರೆ ಕೇವಲ ೯ ದಿನಕ್ಕೆ ಸೀಮತವಲ್ಲ ಬದಲಿದೆ ಒಂದು ತಿಂಗಳ ಜಾತ್ರೆ.
ದೇವಲಾಯಕ್ಕೆ ಸಾಂಪ್ರದಾಯಿಕ ಶೈಲಿಯ ಅಲಂಕಾರ ೯ ದಿನಕ್ಕೆ ಸೀಮಿತ ವಾಗಿ ಹತ್ತನೇ ದಿನದ ದಶಮಿಗೆ ಮುಗಿದರೂ ಜಾತ್ರೆಗೆ ಬಂದ ಮಾರಾಟಗಾರರು ಬರೋಬ್ಬರಿ ಒಂದು ತಿಂಗಳ ಠಿಕಾಣಿ ಹೂಡುವುದು ವಾಡಿಕೆ.
ಪ್ರತಿ ದಿನ ಸಂಜೆ ಜಾತ್ರೆಗೆ ಲಗ್ಗೆ ಇಡುತ್ತಿದ್ದ ಧಾರವಾಡದ ಹೆಂಗಳೆಯರು ಮನೆಗೆ ಬೇಕಾಗುವ ಅಡುಗೆ, ಅಲಂಕಾರಿಕ ವಸ್ತುಗಳು, ನಾನಾ ಬಗೆಯ ಬಟ್ಟೆ, ವೇನಿಟಿ ಬ್ಯಾಗ್, ಸೇರಿದಂತೆ ವಿವಿಧ ಬಗೆಯ ಸಾಮಗ್ರಿಗಳನ್ನು ಇಲ್ಲಿಂದ ಖರೀದಿಸುವ ಮೂಲಕ ಜಾತ್ರೆಗೆ ಸಡಗರದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಅದಾವುದು ಇಲ್ಲವಾಗಿದೆ.
🖋ಪ್ರಶಾಂತ ರಾಜಗುರು ಧಾರವಾಡ
ಪ್ರತಿ ವರ್ಷ ಶ್ರೀ ಲಕ್ಷ್ಮಿ ನಾರಾಯಣ ಜಾತ್ರೆಯಲ್ಲಿ ಪಾಲ್ಗೊಳ್ಳುವುದೇ ನಮಗೊಂದು ಸಡಗರವಾಗಿತ್ತು. ಆದರೆ ಈ ಬಾರಿ ಕರೋನಾ ಕಾಟದಿಂದಾಗಿ ಅದಕ್ಕೆ ಅವಕಾಶವಿಲ್ಲ. ಮುಂದಿನ ವರ್ಷ ಕರೋನಾ ತೊಲಗಿ ಮತ್ತೆ ಜಾತ್ರೆ ಕಳೆಗಟ್ಟುವಂತಾಗಲಿ
– ಅಕ್ಕಮಹಾದೇವಿ ಯರಗಂಬಳಿಮಠನಾವು ಪ್ರತಿವರ್ಷ ಒಂದು ತಿಂಗಳ ಕಾಲ ಜಾತ್ರೆಯಲ್ಲಿ ಅಂಗಡಿ ಹಾಕಿ ವ್ಯಾಪಾರ ಮಾಡುತ್ತಿದ್ದೇವು.
ಆದರೆ ಈ ಬಾರಿ ಅದಕ್ಕೆ ಅವಕಾಶ ವಿಲ್ಲ. ಲಾಕ್ಡೌನ್ ನಿಂದಾಗಿ ವ್ಯಾಪಾರ ಹಾಳಾಗಿದ್ದು ದಿಕ್ಕೆ ತೋಚುತ್ತಿಲ್ಲ.
– ಮಂಜುನಾಥ , ವ್ಯಾಪಾರಸ್ಥರುಈ ವರ್ಷ ಜಾತ್ರೆಯಲ್ಲಿ ಅಂಗಡಿ ಹಾಕಲು ಅವಕಾಶ ಇಲ್ಲ ಕೇವಲ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮ ನಡೆಯಲಿದೆ. ಕರೋನಾ ನಿಯಂತ್ರಣ ಅನಿವಾರ್ಯತೆ ಇರುವುದರಿಂದ ಸರಕಾರದ ಆದೇಶ ಪಾಲಿಸಲಾಗುತ್ತಿದೆ.
– ಅಮರ ಟಿಕಾರೆ ಮುಖ್ಯಸ್ಥರು ದೇವಸ್ಥಾನ ಕಮೀಟಿ