ತಾಯಿಯ ಮೇಲೆಯೂ ಹಲ್ಲೆ ಮಾಡಿದ ಕಿರಾತಕ ಪೊಲೀಸ್ ವಶಕ್ಕೆ
ಧಾರವಾಡ prajakiran.com :
ಧಾರವಾಡದ ಸಪ್ತಾಪುರದ ದುರ್ಗಾದೇವಿ ದೇವಾಲಯದ ಹತ್ತಿರ ಕುಡಿತದ ಚಟಕ್ಕೆ ದಾಸನಾಗಿದ್ದ ಪಾಪಿ ಮೊಮ್ಮಗನೇ ಅಜ್ಜಿಯನ್ನು ಕೊಂದ ಹೃದಯ ವಿದ್ರಾವಕ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕೊಲೆಯಾದ ನತದೃಷ್ಟ ಅಜ್ಜಿಯನ್ನು ಭೀಮವ್ವ ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಮೊಮ್ಮಗ ದತ್ತಾತ್ರೇಯ ಎಂದು ಗುರುತಿಸಲಾಗಿದೆ ಎಂದು ಉಪನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ರಮೇಶ ಹೂಗಾರ ಪ್ರಜಾಕಿರಣ. ಕಾಮ್ ಗೆ ತಿಳಿಸಿದ್ದಾರೆ.
ಕುಡಿತಕ್ಕೆ ಹಣ ನೀಡುವಂತೆ ಪೀಡಿಸಿದ್ದಾನೆ. ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಅಜ್ಜಿ ಕುಸಿದು ಬಿದ್ದು ಸಾವನ್ನಪ್ಪಿದರು.
ಈ ವೇಳೆ ಆತನನ್ನು ತಡೆಯಲು ಹೋದ ತನ್ನ ತಾಯಿ ಮೇಲೆ ಕೂಡ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ದತ್ತಾತ್ರೇಯನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ವಿವರಿಸಿದರು.
ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ತನಿಖೆ ಮುಂದುವರೆದಿದೆ.
ಇದರಿಂದಾಗಿ ಸ್ಥಳೀಯರು ಕೆಲ ಕಾಲ ಬೆಚ್ಚಿ ಬಿದ್ದಿದ್ದಾರೆ.