ಬೆಳಗಾವಿ prajakiran.com :
ಹಿರಿಯ ರೈತ ಹೋರಾಟಗಾರ ಹಾಗೂ ಪತ್ರಕರ್ತರಾಗಿದ್ದ ಕಲ್ಯಾಣರಾವ್ ಮುಚಳಂಬಿ(72) ವಿಧಿವಶರಾದರು.
ಬೆಳಗಾವಿ ಜಿಲ್ಲೆಯ ಗೋಕಾಕ್ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ಸಾವಳಗಿ ಶಿವಲಿಂಗೇಶ್ವರ ಮಠಕ್ಕೆ ಪಾದಯಾತ್ರೆಗೆ ತೆರಳಿದ್ದರು.
ಮಠಕ್ಕೆ ಪಾದಯಾತ್ರೆ ಮೂಲಕ ಬರೋದಾಗಿ ಹರಕೆ ಹೊತ್ತಿದ್ದರು.
ಹೀಗಾಗಿ ಅಕ್ಟೋಬರ್ 3ರಂದು ಬೆಳಗಾವಿಯಿಂದ ಗೋಕಾಕ ತಾಲೂಕಿನ ಸಾವಳಗಿಗೆ ಪಾದಯಾತ್ರೆಗೆ ತೆರಳಿದ್ದರು.
ಮಾರ್ಗಮಧ್ಯೆ ಸುಸ್ತು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲು ಆಗಿದ್ದರು.
ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸುಸ್ತು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ಗೋಕಾಕನ ಖಾಸಗಿ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯದಲ್ಲಿ ಕೊನೆಯುಸಿರು ಬಿಟ್ಟಿದ್ದಾರೆ.
ರೈತ ಹೋರಾಟಗಾರ ದಿ.ಪ್ರೊ.ನಂಜುಂಡಸ್ವಾಮಿ ಒಡನಾಡಿಯಾಗಿದ್ದ ಕಲ್ಯಾಣರಾವ್ ಮುಚಳಂಬಿ ಅವರು
35 ವರ್ಷಗಳ ಹಿಂದೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ‘ಹಸಿರು ಕ್ರಾಂತಿ’ ಪತ್ರಿಕೆ ಸ್ಥಾಪನೆ ಮಾಡಿದ್ದರು.
ರೈತಪರ, ಕನ್ನಡಪರ ಹಾಗೂ ಗಡಿ ಹೋರಾಟದಲ್ಲಿ ಸಕ್ರಿಯರಾಗಿದ್ದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗೆ ಭಾಜನರಾಗಿದ್ದ ಅವರು
ರೈತರ ಆತ್ಮಹತ್ಯೆ ತಡೆಗೆ ವಿವಿಧ ಮಠಾಧೀಶರ ಜೊತೆ 150ಕ್ಕೂ ಹೆಚ್ಚು ಗ್ರಾಮಗಳಿಗೆ ಪಾದಯಾತ್ರೆ ಕೈ ಗೊಂಡಿದ್ದರು.
ಜೈಲ್ ಭರೋ ಚಳವಳಿಯಲ್ಲಿ ಭಾಗವಹಿಸಿ ಎರಡು ಬಾರಿ ಸೆರೆಮನೆ ವಾಸ ಅನುಭವಿಸಿದ್ದರು.
ಪತ್ರಿಕಾ ರಂಗವಷ್ಟೇ ಅಲ್ಲದೇ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸಿದ್ದ ಅವರು
ಅಖಿಲ ಭಾರತ ವೀರಶೈವ ಮಹಾಸಭೆ ಕೇಂದ್ರ ಸಮಿತಿ ಕಾರ್ಯದರ್ಶಿಯಾಗಿದ್ದರು.
ಅವರು ಇತ್ತೀಚೆಗೆ ಕಲ್ಯಾಣ ಕರ್ನಾಟಕ ಪಾರ್ಟಿ ನೋಂದಣಿ ಮಾಡಿಸಿದ್ದರು.
ಅವರು ಪತ್ನಿ, ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಮತ್ತು ಶಿಷ್ಯ ಸಮೂಹವನ್ನು ಅಗಲಿದ್ದಾರೆ.
ರಾತ್ರಿ 8 ಗಂಟೆಯಿಂದ ಬೆಳಗಾವಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಾಳೆ ಬೆಳಗ್ಗೆ 11 ಗಂಟೆಗೆ ಬೆಳಗಾವಿಯ ಸದಾಶಿವನಗರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.