ಗದಗ prajakiran.com : ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಕಬಲಾಯತಕಟ್ಟಿ ತಾಂಡದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಲಕ್ಷ್ಮಣ ಪಾಂಡಪ್ಪ ಲಮಾಣಿ (39) ಮೃತ ದುರ್ದೈವಿ. ಈತನ ಪತ್ನಿ ಲಲಿತಾ ಮತ್ತು ಈಕೆಯ ಪ್ರಿಯಕರ ಸೋಮಪ್ಪ ಚೆನ್ನಪ್ಪ ಲಮಾಣಿ ಕೊಲೆ ಮಾಡಿದ ಆರೋಪಿಗಳು. ರಾತ್ರಿ ಮನೆಯಲ್ಲಿ ಮಲಗಿದ್ದ ಲಕ್ಷ್ಮಣ ಪಾಂಡಪ್ಪ ಅವರನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.
ಕಳೆದ ಹಲವು ವರ್ಷಗಳಿಂದ ಲಲಿತಾ, ಸೋಮಪ್ಪ ನಡುವೆ ಅನೈತಿಕ ಸಂಬಂಧ ಇತ್ತು. ಈ ವಿಷಯ ತಿಳಿದ ಪತಿ ಲಕ್ಷ್ಮಣ ಪತ್ನಿ ಲಲಿತಾ ಜೊತೆಗೆ ನಿತ್ಯವೂ ಜಗಳವಾಡುತ್ತಿದ್ದ ಎನ್ನಲಾಗಿದೆ.
ಗೋವಾದ ಕಲ್ಲಂಗುಟನಲ್ಲಿ ದಂಪತಿಗಳು ಮೀನು ಮಾರಾಟ ಮಾಡುತ್ತಿದ್ದರು. ಲಾಕ್ ಡೌನ್ ಹಿನ್ನೆಲೆ ತಾಂಡಾಗೆ ವಾಪಾಸಾಗಿದ್ದರು. ಕೊಲೆ ಮಾಡಿದ ನಂತರ ಲಲಿತಾ ಎಂದಿನಂತೆ ಇದ್ದು, ಶವದೊಂದಿಗೆ ರಾತ್ರಿಯಿಡೀ ಮಲಗಿದ್ದಾಳೆ.
ಮುಂಜಾನೆ ಬಾಯಿ ಬಡಿದುಕೊಂಡು, ಜನರನ್ನು ಸೇರಿಸಿದ್ದಾಳೆ. ಬಂದ ಜನ ಕುತ್ತಿಗೆಯ ಮೇಲಿನ ಗುರುತು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕುತ್ತಿಗೆಗೆ ಬಿಗಿದಿದ್ದ ಹಗ್ಗ ವನ್ನು ಲಲಿತಾ ಹಾಗೂ ಸೋಮಪ್ಪ ಸುಟ್ಟು ಹಾಕಿದ್ದು, ಸಾಕ್ಷ್ಯ ನಾಶ ಮಾಡಿದ್ದಾರೆ. ರಾತ್ರಿಯೇ ಲಲಿತಾ ಹಾಗೂ ಸೋಮಪ್ಪರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಂಧನದಲ್ಲಿರುವ ಆರೋಪಿಗಳನ್ನು ಪೊಲೀಸರು ಶುಕ್ರವಾರ ಕೋರ್ಟ್ಗೆ ಹಾಜರು ಪಡಿಸಿ ತನಿಖೆ ಕೈಗೊಂಡಿದ್ದಾರೆ.