ಬಡವರಿಗೆ ನಿವೇಶನ ಹಾಗೂ ಮನೆಗಳನ್ನು ಒದಗಿಸಲು ಕಾನೂನು ಸರಳೀಕರಣ ಅಗತ್ಯ : ಬಸವರಾಜ ಬೊಮ್ಮಾಯಿ
ಬೆಂಗಳೂರು prajakiran.com : ಜನವರಿ 31: ಬಡವರಿಗೆ ನಿವೇಶನ ಹಾಗೂ ಮನೆಗಳನ್ನು ಒದಗಿಸಲು ಕಾನೂನು ಸರಳೀಕರಣ ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ವತಿಯಿಂದ ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳಿಗೆ ಹಂಚಕೆ ಪತ್ರ ವಿತರಿಸಿ ಮಾತನಾಡುತ್ತಿದ್ದರು.
ಕಾನೂನುಬದ್ಧವಾಗಿ ಬಡಾವಣೆಗಳು ಅಭಿವೃದ್ಧಿಯಾಗದಿದ್ದರೆ, ಮೂಲಭೂತ ಸೌಕರ್ಯಗಳ ಕೊರತೆಗಳಿರುವ ಕಂದಾಯ ನಿವೇಶಗಳು ದೊಡ್ಡ ಸಂಖ್ಯೆಯಲ್ಲಿ ಹೆಚ್ಚಾಗುತ್ತವೆ. ಈ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಬಡವರಿಗೆ ಮನೆ, ನಿವೇಶನ ಪಡೆಯಲು ಸರ್ಕಾರ ಕಾನೂನಿನ ಸರಳೀಕರಣ ಮಾಡಲಿದೆ ಎಂದರು.
*ಸಾಮಾಜಿಕ ಸವಾಲು*: ನಗರ ಪ್ರದೇಶಗಳಲ್ಲಿ ವಸತಿ ಕಲ್ಪಿಸುವುದು ಬಹಳ ಮುಖ್ಯವಾಗಿದೆ. ಆದರೆ ನಗರ ಪ್ರದೇಶದಲ್ಲಿ ನಿವೇಶನ ಮತ್ತು ವಸತಿ ಪಡೆದುಕೊಳ್ಳುವುದು ಬಹಳ ಕಷ್ಟಕರವಾಗಿದೆ. ಇದೊಂದು ಸಾಮಾಜಿಕ ಸವಾಲಾಗಿದೆ. ಯಾರಿಗಾದರೂ ಗೌರವಯುತವಾಗಿ ಬದುಕಲು ಅನ್ನ ನೀರಿನ ಜೊತೆಗೆ ಸೂರು ಇರಲೇಬೇಕು ಎಂದರು. ಈ ಯೋಜನೆಯನ್ನು ಸಾಕಾರಗೊಳಿಸಲು ಛಲತೊಟ್ಟಿರುವ ವಸತಿ ಸಚಿವರ ಶ್ರಮವನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು.
*ಕಂತಿನಲ್ಲಿ ಹಣ*: 46 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ಹಂಚಬೇಕು. ಉಳಿದ 64 ಸಾವಿರ ಮನೆಗಳಿಗೂ ಆಯ್ಕೆ ಪ್ರಕ್ರಿಯೆ ಪ್ರಾರಂಭ ಮಾಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಪ್ರಾರಂಭದಲ್ಲಿ ಹಣ ನೀಡಿದರೆ ಬಡ್ಡಿ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ಫಲಾನುಭವಿಗಳಿಂದ ವ್ಯಕ್ತವಾಗಿದ್ದು, ಕಂತಿನಲ್ಲಿ ಹಣ ಪಡೆಯುವ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ಒಂದು ಲಕ್ಷ ಮನೆಗಳನ್ನು ಮುಂದಿನ ಡಿಸೆಂಬರ್ ಒಳಗೆ ಮುಗಿಸಬೇಕು. ಇದು ಯಶಸ್ವಿಯಾದರೆ ಮತ್ತೊಂದು ಯೋಜನೆಯನ್ನು ಕೈಗೊಳ್ಳಲಾಗುವುದು ಎಂದರು.
*ಟೌನ್ಶಿಪ್ ನಿರ್ಮಾಣ:*
ಬಡವರಿಗಾಗಿ ಸ್ಯಾಟಿಲೈಟ್ ಟೌನ್ಶಿಪ್ ನಿರ್ಮಿಸಲು ಯೋಜನೆ ಸಿದ್ಧಮಾಡಿ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ರಸ್ತೆ ಸಂಪರ್ಕ ಕಲ್ಪಿಸಿ, ಟೌನ್ಶಿಪ್ ಸ್ವಾವಲಂಬಿಯಾಗಿರುವಂತೆ ಮಾಡಬೇಕೆಂದು ಸೂಚಿಸಿದರು.
*ವಸತಿ ಕ್ರಾಂತಿ*:
4 ಲಕ್ಷ ಗ್ರಾಮೀಣ ಮನೆಗಳು, ನಗರ ಪ್ರದೇಶಗಳಲ್ಲಿ 1 ಲಕ್ಷ ಮನೆ, 97 ಸಾವಿರ ಮನೆಗಳನ್ನು ಕೊಳಗೇರಿಗಳಲ್ಲಿ ಪ್ರಾರಂಭ ಮಾಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜೆನೆಯಡಿ ಹೆಚ್ಚಿನ ಮನೆಗಳಾಗಲಿವೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ವಸತಿ ಕ್ರಾಂತಿ ಆಗಲಿದೆ. ನಿಗದಿತ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡು ಬಡವರ ತಲೆಯೆ ಮೇಲೆ ಸೂರು ಕಲ್ಪಿಸೋಣ ಎಂದರು.
ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ 46,499 ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಇಂದು ಚಾಲನೆ ನೀಡಲಾಗಿದೆ. 6 ಸಾವಿರ ಮನೆಗಳು ಶೇ 100ರಷ್ಟು ಪೂರ್ಣಗೊಂಡಿವೆ ಎಂದರು. ಫಲಾನುಭವಿಗಳು ಒಟ್ಟಿಗೆ ಹಣ ಕಟ್ಟಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಮುಂದೆ ಬಾರದ ಕಾರಣ ಯೋಜನೆ ಸ್ವಲ್ಪ ತಡವಾಗಿದೆ ಎಂದರು.
ಸಭೆಯಲ್ಲಿ ಪೌರಾಡಳಿತ ಸಚಿವ ಎಂ.ಟಿ. ಬಿ.ನಾಗಾರಾಜ್, ಬಿ.ಡಿ.ಎ. ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಬಿ.ಹೆಚ್.ಅನಿಲ್ ಕುಮಾರ್, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಜೆ.ರವಿಶಂಕರ್, ವ್ಯವಸ್ಥಾಪಕ ನಿರ್ದೇಶಕ ಡಾ: ಬಸವರಾಜು ಮೊದಲಾದವರು ಉಪಸ್ಥಿತರಿದ್ದರು.