ಧಾರವಾಡ Prajakiran.com : ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಪೋಗರು ಚಿತ್ರದಲ್ಲಿ ಬ್ರಾಹ್ಮಣ ಮತ್ತು ಹಿಂದೂ ಸಮುದಾಯವನ್ನ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಹಾಗೂ ಚಿತ್ರದ ವಿರುದ್ಧ, ಸೆನ್ಸಾರ್ ಮಂಡಳಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಧಾರವಾಡ ತಾಲೂಕ ಬ್ರಾಹ್ಮಣ ಸಭಾ ಸದಸ್ಯರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಕಲಾಭವನದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಪೋಗರು ಚಿತ್ರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಹಾಗೂ ಹಿಂದೂ ಸಮಾಜವನ್ನು ಅವಮಾನ ಮಾಡಲಾಗಿದೆ. ತಮ್ಮ ಚಲನಚಿತ್ರವನ್ನು ವೈಭವೀಕರಿಸುವ ಭರದಲ್ಲಿ ಹಿಂದೂ ಸಮಾಜದ ಆಚರಣೆಯನ್ನು ಅವಮಾನ ಮಾಡಲಾಗಿದೆ. ಈ ಚಲನಚಿತ್ರದಲ್ಲಿ ಹಿಂದೂ ವಿರೋಧಿ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಈ ದೃಶ್ಯಗಳನ್ನು ಕಟ್ ಮಾಡುವಂತೆ ಒತ್ತಾಯ ಮಾಡಿದ್ದರೂ ಚಿತ್ರ ನಿರ್ಮಾಪಕರು ಬೆಲೆ ಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹಿಂದೂ ಸಮಾಜವನ್ನು ಈ ರೀತಿ ಅವಮಾನ ಮಾಡುತ್ತಲೇ ಬರಲಾಗುತ್ತಿದೆ. ಕೂಡಲೇ ಚಿತ್ರ ನಿರ್ಮಾಪಕರು ಆ ದೃಶ್ಯಗಳನ್ನು ಕಟ್ ಮಾಡಬೇಕು ಇಲ್ಲದೇ ಹೋದರೆ ಮುಂದೆಯೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು ಪೊಗರು ಚಿತ್ರದ ವಿರುದ್ಧ ಧಿಕ್ಕಾರ ಕೂಗಿದರು.
ಸರ್ಕಾರ ಕೂಡಲೆ ಎಚ್ಚೆತ್ತು ಈ ರೀತಿ ಮುಂದಿನ ಚಿತ್ರಗಳು ಸೆನ್ಸಾರ್ ಮಾಡುವಾಗ ಜಾಗೃತಿ ವಹಿಸಬೇಕು ಪೋಗರು ಚಿತ್ರ ಸೆನ್ಸಾರ್ ಪರೀಕ್ಷೆ ಮಾಡಿದ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.