ಧಾರವಾಡ prajakiran.com : ಭಾರತೀಯ ಜನತಾ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪದ ಮೇಲೆ ಧಾರವಾಡ ಜಿಲ್ಲಾ ಪಂಚಾಯತನ ನಾಲ್ವರು ಸದಸ್ಯರನ್ನು ಅನರ್ಹಗೊಳಿಸಿದ ರಾಜ್ಯ ಚುನಾವಣಾ ಆಯೋಗದ ಆದೇಶಕ್ಕೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕಳೆದ ಜೂ. ೧೦ ರಂದು ರಾಜ್ಯ ಚುನಾವಣಾ ಆಯೋಗವು ಬಿಜೆಪಿಯ ಧಾರವಾಡ ಜಿಲ್ಲಾ ಪಂಚಾಯತನ ತಬಕದ ಹೊನ್ನಳ್ಳಿ ಜಿಪಂ ಸದಸ್ಯರಾದ ಮಂಜವ್ವ ಶೇಖಪ್ಪ ಹರಿಜನ, ಗಳಗಿ ಹುಲಕೊಪ್ಪ ಜಿಪಂ ಸದಸ್ಯ ಅಣ್ಣಪ್ಪ ಫಕೀರಪ್ಪ ದೇಸಾಯಿ, ಗುಡಗೇರಿ ಜಿಪಂ ಸದಸ್ಯೆ ಜ್ಯೋತಿ ಶಿವಾನಂದ ಬೆಂತೂರ ಮತ್ತು ಗರಗ ಜಿಪಂ ಸದಸ್ಯರಾದ ರತ್ನಾ ದಯಾನಂದ ಪಾಟೀಲ ಅವರನ್ನು ಅನರ್ಹಗೊಳಿಸಿ ಆದೇಶಿಸಿತ್ತು.
ಆ ಬಳಿಕ ಈ ನಾಲ್ವರು ಸದಸ್ಯರು ಚುನಾವಣಾ ಆಯೋಗದ ಆದೇಶಕ್ಕೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸದಸ್ಯರ ಪರವಾಗಿ ಹಿರಿಯ ನ್ಯಾಯವಾದಿ ಎ.ಪೊನ್ನಣ್ಣ, ವಕೀಲರಾದ ಮೌನೇಶ, ಪ್ರದೀಪ ಮತ್ತು ಎನ್.ಸಿ. ಪಾಟೀಲ ವಕಾಲತ್ತು ವಹಿಸಿದ್ದರು.
ಸದಸ್ಯರ ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಗುರುವಾರ ಚುನಾವಣಾ ಆಯೋಗದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಸದಸ್ಯರು ಕಳೆದ ವರ್ಷದ ಫೆಬ್ರುವರಿ ೫ ರಂದು ಅಂದು ಜಿಪಂ ಅಧ್ಯಕ್ಷೆಯಾಗಿದ್ದ ಬಿಜೆಪಿ ಚೈತ್ರಾ ಶಿರೂರ ಅವರ ವಿರುದ್ಧ ಕಾಂಗ್ರೆಸ್ ಸದಸ್ಯರು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ನಿರ್ಣಯ ಸಂದರ್ಭದಲ್ಲಿ ಈ ನಾಲ್ವರು ಸಭೆಗೆ ಗೈರಾಗಿದ್ದರು.
ನಂತರ ಕಾಂಗ್ರೆಸ್ ಪಕ್ಷದ ವಿಜಯಲಕ್ಷ್ಮಿ ಪಾಟೀಲ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷವು ಜಿಲ್ಲಾ ಪಂಚಾಯತ ಆಡಳಿತದ ಗದ್ದುಗೆ ಏರಿತ್ತು.
ಈ ಬೆಳವಣಿಗೆಯಿಂದ ಜಿಲ್ಲೆಯ ಬಿಜೆಪಿ ಮುಖಂಡರು ತೀವ್ರ ಇರಿಸುಮುರುಸುಗೊಂಡಿದ್ದರು.
ಬಿಜೆಪಿಯಿಂದ ಆಯ್ಕೆಯಾಗಿದ್ದ ನಾಲ್ವರು ಸದಸ್ಯರು ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದು, ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಅಂದಿನ ಬಿಜೆಪಿ ಜಿಲ್ಲಾ ಅಧ್ಯಕ್ಷ ಈರಣ್ಣ ಜಡಿ ಅವರು ಚುನಾವಣಾ ಆಯೋಗದ ಕದ ತಟ್ಟಿದ್ದರು.
ಜಿಲ್ಲಾ ಪಂಚಾಯತ ಗದ್ದುಗೆಯಿಂದ ಕೆಳಗಿಳಿದು ಅಧಿಕಾರ ವಂಚಿತವಾಗಿದ್ದ ಬಿಜೆಪಿ, ಈ ನಾಲ್ವರು ಸದಸ್ಯರನ್ನು ಅನರ್ಹಗೊಳಿಸುವಲ್ಲಿ ಕೊನೆಗೂ ಯಶಸ್ವಿಯಾಗಿತ್ತು.
ಚುನಾವಣಾ ಆಯೋಗ ಅನರ್ಹಗೊಳಿಸಿದರೆ, ಈಗ ಹೈಕೋರ್ಟ್ ಚುನಾವಣಾ ಆಯೋಗದ ಆದೇಶಕ್ಕೆ ತಡೆಯಾಜ್ಞೆ ನೀಡುವ ಮೂಲಕ ಸದಸ್ಯರ ಅನರ್ಹ ಪ್ರಕರಣ ಇದೀಗ ಮತ್ತೊಂದು ಹಂತ ತಲುಪಿದೆ.
ಜೊತೆಗೆ ಅನರ್ಹಗೊಂಡಿದ್ದ ಸದಸ್ಯರು ಜಿಲ್ಲಾ ಪಂಚಾಯತನ ಸಭೆಗಳಿಗೆ ಭಾಗವಹಿಸುವ ಅವಕಾಶವನ್ನು ಉಳಿಸಿಕೊಂಡಂತಾಗಿದೆ.
ನಾವು ಜಿಪಂ ಸದಸ್ಯರಾಗಿ ಕಾನೂನು ಬದ್ಧವಾಗಿ ನಡೆದುಕೊಂಡಿದ್ದೇವು. ಹೀಗಾಗಿ ಚುನಾವಣಾ ಆಯೋಗದ ಆದೇಶದಿಂದ ನಾವು ವಿಚಲಿತರಾಗಿರಲಿಲ್ಲ.
ಇದೀಗ ಹೈಕೋರ್ಟ್ ನಲ್ಲಿ ನಮಗೆ ನ್ಯಾಯ ದೊರೆತಿದ್ದು ಸಂತಸ ತಂದಿದೆ ಎಂದು ಜಿಪಂ ಸದಸ್ಯೆ ಜ್ಯೋತಿ ಬೆಂತೂರ ತಿಳಿಸಿದ್ದಾರೆ.