ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಾಂಜಾ ದಂಧೆಗೆ ಕಡಿವಾಣ ಹಾಕಬೇಕಾದ ಪೊಲೀಸರೆ ಗಾಂಜಾ ಪ್ರಕರಣವೊಂದನ್ನು ಮುಚ್ಚಿಹಾಕಲು ಹೋಗಿ ಅಮಾನತುಗೊಂಡ ಘಟನೆ ಹುಬ್ಬಳ್ಳಿ ನವನಗರ ಹಾಗೂ ಗೋಕುಲ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ನವನಗರ ಎಪಿಎಂಸಿ ಠಾಣೆಗೆ ಸಾರ್ವಜನಿಕರೊಬ್ಬರು ನೀಡಿದ ಗಾಂಜಾ ಮಾರಾಟದ ಮಾಹಿತಿ ಆಧರಿಸಿ ದಾಳಿ ನಡೆಸಿ, ಸುಮಾರು ಒಂದೂವರೆ ಕೆಜಿ ಗಾಂಜಾ ವಶಕ್ಕೆ ಪಡೆದಿದ್ದರು.
ಆದರೆ ಪ್ರಕರಣ ದಾಖಲಿಸದೆ ಕೈ ತೊಳೆದುಕೊಂಡು, ವಶಪಡಿಸಿಕೊಂಡ ಗಾಂಜಾವನ್ನು ತಾವೇ ಮಾರಾಟ ಮಾಡಿ ಆ ಆರೋಪಿಗಳ ರಕ್ಷಣೆ ಮಾಡಲು ಮುಂದಾಗಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು,
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ ಆಯುಕ್ತ ಲಾಭೂರಾಮ್ ತನಿಖೆ ನಡೆಸಲು ಆದೇಶ ಮಾಡಿದ್ದರು.
ತನಿಖೆ ನಡೆಸಿದ ಡಿಸಿಪಿ ಕೆ.ರಾಮರಾಜನ್ ಪೊಲೀಸ್ ಆಯುಕ್ತರಿಗೆ ವರದಿ ನೀಡಿದ್ದು, ಆ ವರದಿ ಆಧರಿಸಿ ನವನಗರ ಠಾಣೆಯ ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ ಸೇರಿ 7 ಪೊಲೀಸರನ್ನು ಅಮಾನತು ಮಾಡಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ಅಮಾನತಿಗೆ ಒಳಗಾದ ಪೊಲೀಸರ ವಿವರ :
ಎಪಿಎಂಸಿ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ, ಎಎಸ್ಐ ಕರಿಯಪ್ಪ ಗೌಡ, ಕಾನ್ಸ್ಟೇಬಲ್ಗಳಾದ ವಿಕ್ರಮ ಪಾಟೀಲ್, ನಾಗರಾಜ್, ಶಿವಕುಮಾರ ಮೇತ್ರಿ,
ಗೋಕುಲ ರಸ್ತೆ ಠಾಣೆಯ ಮಹಿಳಾ ಕಾನ್ಸ್ಟೇಬಲ್ ದಿಲ್ಶ್ಯಾದ,
ಹಾಗೂ ಹೊನ್ನಪ್ಪನವರ್ ಅಮಾನತುಗೊಂಡವರು.
ಆ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯ ವ್ಯಾಪ್ತಿಯಲ್ಲಿ ಇರುವ ಹುಬ್ಬಳ್ಳಿ ಧಾರವಾಡ ಅವಳಿ ನಗರ ಪೊಲೀಸ್ ಠಾಣೆಗಳಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನಿಸಿ ಪೊಲೀಸ್ ಇಲಾಖೆಗೆ ಮುಜುಗರ ತಂದಿದ್ದಾರೆ ಎಂದರೆ ತಪ್ಪಾಗಲಾರದು.