ಪರಮ ಪರತರವೂ, ಮಂಗಳಕೆ ಮಂಗಳವೂ ಎನಿಸುವ ಈ ನವರಾತ್ರಿ ಪರ್ವದ ಪ್ರಥಮ ದಿನವಾದ ಇಂದು ನಾವು ದೇವಿಯನ್ನು ಅಪರ್ಣ ರೂಪದಲ್ಲಿ ಧ್ಯಾನಿಸುವುದು.
ಹಿಮವಂತ ಕುಮಾರಿಯಾಗಿ ಅವತರಿಸಿದ ಶ್ರೀ ದೇವಿಯು, ಪರಮೇಶ್ವರನನ್ನು ಪತಿಯಾಗಿ ಹೊಂದಲು ಘೋರ ತಪವನ್ನು ಆಚರಿಸುವಳು.
ಸದಾ ಶಿವ ಧ್ಯಾನ ತತ್ಪರಾಳಾದ ರಾಜ ಕನ್ಯೆಯು ಐಹಿಕ ವಿಷಯಗಳಿಂದ ವಿರಕ್ತಿಯನ್ನು ಹೊಂದಿ ಶಿವಧ್ಯಾನಚಿತ್ತಳಾಗುವಳು.
ಋಷಿ, ವೈರಾಗಿಗಳನ್ನೂ, ಆತ್ಮ ಕೋವಿದರನ್ನು ಮೀರಿ ಯೋಗೀಶ್ವರನಾದ ಶಿವ ಸಮಾನವಾದ ಧ್ಯಾನವನ್ನಾಚರಿಸುವಳು. ಪರಮ ಸಮಾಧಿಯ ಧ್ಯಾನಾವಸ್ಥೆಯನ್ನು ಹೊಂದುತ್ತಿರುವಂತೆಯೇ ದೇವಿಯು ಆಹಾರಾದಿಗಳನ್ನು ವರ್ಜಿಸುವುದಲ್ಲದೆ ಸಾಧಕರಿಗೆ ಗ್ರಹಣ ಯೋಗ್ಯವಾದ ಪರ್ಣವನ್ನೂ ವರ್ಜಿಸಿ ಪರಮೋಚ್ಛ ಯೋಗಾವಸ್ಥೆಯನ್ನು ಸಿದ್ಧಿಸಿವಳು. ದೇವಿಯು ಕೇವಲ ಪರ್ಣ ಮಾತ್ರವನ್ನೂ ನಿರಾಕರಿಸಿ ಹರ ಧ್ಯಾನಲಗ್ನಳಾದುದನ್ನು ವಿಸ್ಮಯದ ತೆರದಿ ಕಂಡು ಅಂತರಮುಖಿಗಳು , ಯೋಗಿಳು, ಕುಂಡಲಿನಿ ಮಾಯೆಯಾದ, ಪರಾ ವಿದ್ಯೆಯನ್ನು ಅಪರ್ಣ ಎಂಬ ನಾಮದಿಂದ ಸ್ತುತಿಸಿದರು. ಇನಿತು ಧ್ಯಾನದ ಫಲವಾಗಿ ಪಾರ್ವತಿ ದೇವಿಯು ಸದಾಶಿವ ಕುಟುಂಬಿನಿಯಾಗಿ ಮನೋನ್ಮಣಿ ಎಂದನಿಸಿದಳು.
ಸದಾ ಬಾಹ್ಯ ವಿಷಯ ಪದಾರ್ಥಗಳನ್ನೇ ಸಾಧಿಸ ಬಯಸುವ ವೇಗದಲ್ಲಿ, ಅಂತಃ ಶಕ್ತಿ, ಚೈತನ್ಯದ ಜಾಗೃತಿಯೇ ಗೌಣ. ಪರಮ ಸತ್ಯವೂ, ಸಚ್ಚಿದಾನಂದವೂ ಅಲ್ಲದೆ ಪರಬ್ರಹ್ಮವೇ ಎನಿಸುವ ಆತ್ಮದ ಅರಿವಿನ ಮಾರ್ಗವೇ ಜ್ಞಾನ, ಯೋಗ, ಭಕ್ತಿಯು. ಪರಮ ಸತ್ಯದ ಸಾಕ್ಷಾತ್ಕಾರವೂ ಕಿಂಚಿತ್ತಾದರೂ ನಮ್ಮಲಿ ಉಂಟಾಗಲೆಂದು ಪ್ರಾರ್ಥಿಸುತ್ತ ಇಂದಿನ ಆರಾಧ್ಯ ಸನ್ನಿಧಿಯಾದ ಅಪರ್ಣಾ ದೇವಿಯ ಅಡಿಗಳಲ್ಲಿ ಪೊಡಮಡಿಸೋಣ.
ಧಾರವಾಡದ ಕಟ್ಟಿಮಠ ಅವರ ಮನೆಯಲ್ಲಿ ನವರಾತ್ರಿ ಮೊದಲ ದಿನ ದೇವಿ ಅಪರ್ಣಾ ಅಲಂಕಾರ ಮಾಡಲಾಗಿದೆ. ನೀವು ದರ್ಶನ ಭಾಗ್ಯ ಪಡೆದು ಪುನೀತರಾಗಿರಿ.
–ಕಾರ್ತಿಕ ಶಾಂತವೀರ ಕಟ್ಟಿಮಠ