ಬೆಳಗಾವಿ prajakiran.com : ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆ ಆವರಣದಲ್ಲಿದ್ದ ಕಾರಿನ ಚಿನ್ನ ಕಳ್ಳತನ ಪ್ರಕರಣ ಹಾಗೂ ನಕಲಿ ಪೊಲೀಸ್ ಐಡಿ ಬಳಕೆ ಪ್ರಕರಣದ ಕಿಂಗ್ಪಿನ್ ಕಿರಣ್ ವೀರನಗೌಡರ ನನ್ನು ಸಿಐಡಿ ತಂಡ ಹದಿನಾಲ್ಕು ದಿನದ ವಿಚಾರಣೆ ಬಳಿಕ ಮಂಗಳವಾರ ಹೆಚ್ಚಿನ ಚಾರಣೆಗಾಗಿ ಮತ್ತೆ 10 ದಿನ ಕಸ್ಟಡಿಗೆ ಪಡೆದಿದೆ.
ಮಂಗಳವಾರ ಇಲ್ಲಿನ ಐದನೇ ಮುನ್ಸಿಫ್ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದ ತನಿಖಾಧಿಕಾರಿಗಳು, ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ನಕಲಿ ಪೊಲೀಸ್ ಐಡಿ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ 10 ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದರು.
ನ್ಯಾಯಾಧೀಶೆ ಚೈತ್ರಾ ಕುಲಕರ್ಣಿ ಅವರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ 10 ದಿನ ಕಸ್ಟಡಿಗೆ ನೀಡಿ ಆದೇಶಿಸಿದರು.
ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.6ರಂದು ಹಾನಗಲ್ ಸಮೀಪ ಕಿರಣನನ್ನು ವಶಕ್ಕೆ ಪಡೆದು ಸಿಐಡಿ ತಂಡ ಆ ದಿನವೇ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿತ್ತು.
ಬಳಿಕ ಜೂ.7ಕ್ಕೆ ಇಲ್ಲಿನ 4ನೇ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರು ಪಡಿಸಿ, 14 ದಿನ ಕಸ್ಟಡಿಗೆ ಪಡೆದಿದ್ದರು.
ಅದರಂತೆ ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮತ್ತೆ ಕಸ್ಟಡಿಗೆ ನೀಡುವಂತೆ ಕೋರದಿರುವುದು ಕುತೂಹಲ ಕೆರಳಿಸಿತ್ತು.
ಮೂರು ದಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದ ಆರೋಪಿ ಕಿರಣನನ್ನು ಮಂಗಳವಾರ ಮತ್ತೊಂದು ಎಫ್ಐಆರ್ಗೆ ಸಂಬಂಧಿಸಿದ ತನಿಖೆ ನಡೆಸಲು ಪೊಲೀಸ್ ಕಸ್ಟಡಿಗೆ ಪಡೆದಿದೆ.
ಮಧ್ಯಾಹ್ನ ಹಿರೇಬಾಗೇವಾಡಿ ಟೋಲ್ನಲ್ಲಿ ಮಹಜರು ಮಾಡಿ, ಆರೋಪಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೋಯ್ದು ಸಿಐಡಿ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದೆ.