ಧಾರವಾಡ prajakiran.com : ರಾಜ್ಯ ಸರಕಾರವು ನೀಡಿರುವ ಆದೇಶದಂತೆ ಧಾರವಾಡ ಜಿಲ್ಲಾಡಳಿತವು ಇಂದಿನಿಂದ 18 ವರ್ಷ ಮೇಲ್ಪಟ್ಟ ಹಾಗೂ 44 ವರ್ಷದೊಳಗಿನ ಫಲಾನುಭವಿಗಳಿಗೆ ಕೋವಿಡ್ ರೋಗ ನಿರೋಧಕವಾಗಿರುವ ಕೋವಿಶಿಲ್ಡ್ ಲಸಿಕಾರಣ ಆರಂಭಿಸಿದ್ದು, ಸೋಮವಾರ ಸಂಜೆ ಜಿಲ್ಲಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.
ಬೆಳಗಾವಿಯ ಪ್ರಾದೇಶಿಕ ಔಷಧಿ ದಾಸ್ತಾನು ಉಗ್ರಾಣದಿಂದ ಲಸಿಕೆಯು ಮಧ್ಯಾಹ್ನ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರಿ ಔಷಧ ದಾಸ್ತಾನು ಉಗ್ರಾಣಕ್ಕೆ ಬಂದು ತಲುಪಿತು.
ನಂತರ ನಿಗದಿತ ಲಸಿಕಾ ಕೇಂದ್ರಗಳಿಗೆ ತಲುಪಿಸಲಾಗಿದ್ದು, ಇಂದು ಧಾರವಾಡ ಜಿಲ್ಲಾ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆ ಸೆಷನ್ ದಲ್ಲಿ ಈಗಾಗಲೇ ನೋಂದಾಯಿತರಾದ 150 ಜನ ಫಲಾನುಭವಿಗಳಿಗೆ ಕೋವಿಶಿಲ್ಡ್ ಲಸಿಕೆಯನ್ನು ನೀಡಲಾಯಿತು.
ಆರ್.ಸಿ.ಎಚ್.ಓ. ಡಾ.ಎಸ್.ಎಮ್.ಹೊನಕೇರಿ ಅವರು ಮಾತನಾಡಿ, ಸೆಷನ್ ಆರಂಭಿಸಿದ 5 ರಿಂದ 10 ನಿಮಿಷದಲ್ಲಿ ನೋಂದಾಯಿತ ಫಲಾನುಭವಿಗಳ ಪೈಕಿ ಇಂದಿನ ನಿಗದಿತ ಗುರಿಯಂತೆ 150 ಜನರು ಇಂದಿನ ಸೆಷನ್ ಅವಧಿ ಆಯ್ಕೆ ಮಾಡಿಕೊಂಡರು.
ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಲಸಿಕಾಕರಣ ಆರಂಭಿಸಲಾಗಿದ್ದು, ನಾಳೆ ಬೆಳಿಗ್ಗೆ 10 ಗಂಟೆಯಿಂದ ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಹಾಗೂ ಕಲಘಟಗಿ, ಕುಂದಗೋಳ, ನವಲಗುಂದ ತಾಲೂಕಾ ಆಸ್ಪತ್ರೆಗಳಲ್ಲಿ ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಾಯಿತ ಆಗಿರುವ 18 ವರ್ಷ ಮೇಲ್ಪಟ್ಟ ಹಾಗೂ 44 ವರ್ಷದೊಳಗಿನ ಅರ್ಹರಿಗೆ ಲಸಿಕೆಯನ್ನು ನೀಡಲಾಗುತ್ತದೆ.
ಲಸಿಕಾಕರಣಕ್ಕೆ ಬರುವವರು ತಪ್ಪದೇ ಮಾಸ್ಕ್ ಧರಿಸಿರಬೇಕು. ಮತ್ತು ಪರಸ್ಪರ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀನಕರ ಅವರು ಮಾತನಾಡಿ, ಜಿಲ್ಲೆಯ ಅರ್ಹ ಎಲ್ಲ ಫಲಾನುಭವಿಗಳಿಗೆ ಕೋವಿಡ್ ರೋಗ ನಿರೋಧಕ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಜಿ.ಪಂ.ಸಿಇಓ ಡಾ.ಬಿ.ಸುಶೀಲಾ ಅವರು ಈಗಾಗಲೇ ಲಸಿಕಾರಣದ ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿ, ಮಾನ್ಯ ಮುಖ್ಯಮಂತ್ರಿಗಳ ಸೂಚನೆಯಂತೆ ಕೋರೊನಾ ವಾರಿಯರ್ಸ್ ಗಳಾಗಿರುವ ಪತ್ರಕರ್ತರು ಸೇರಿದಂತೆ ಎಲ್ಲ ಅರ್ಹ ಪಲಾನುಭವಿಗಳಿಗೆ ಲಸಿಕೆಯನ್ನು ಮಾರ್ಗಸೂಚಿಗಳ ಪ್ರಕಾರ ನೀಡುವಂತೆ ಸೂಕ್ತ ನಿರ್ದೇಶನ ನೀಡಿದ್ದಾರೆ ಎಂದರು.
ಜಿಲ್ಲಾ ಆಸ್ಪತ್ರೆಯ ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ ಅವರು ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಮಾರ್ಗಸೂಚಿಗಳ ಪ್ರಕಾರ ಲಸಿಕಾಕರಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದ್ದು, ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಪ್ರತ್ಯೇಕ ಲಸಿಕಾ ಕೌಂಟರ್ ಮಾಡಲಾಗುವುದು.
ಲಸಿಕೆ ಬರುವ ಫಲಾನುಭವಿಗಳು ಕೋವಿಡ್ ಸುರಕ್ಷತಾ ಮಾರ್ಗ ಸೂಚಿಗಳನ್ನು ಪಾಲಿಸುವ ಮೂಲಕ ಸಹಕಾರ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ ಜಿಲ್ಲಾ ಸರ್ಜನ್ ಡಾ.ಮನಗೂಳಿ ಸೇರಿದಂತೆ ಇತರ ವೈಧ್ಯಕೀಯ ಸಿಬ್ಬಂದಿ ಇದ್ದರು.