ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವ ಬೆನ್ನಲ್ಲೇ ರೈತರು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಿತ್ತನೆ ಬೀಜ ಖರೀದಿಗೆ ಮುಗಿ ಬಿದ್ದಿದ್ದಾರೆ.
ಆದರೆ ಅವರಿಗೆ ಸಮಯಕ್ಕೆ ಸರಿಯಾಗಿ ಬೀಜ ಸಿಗದಿರುವುದು ತಲೆನೋವಾಗಿ ಪರಿಣಮಿಸಿದೆ. ಬಿತ್ತನೆ ಬೀಜ ಹಾಗೂ ರಸ ಗೊಬ್ಬರದ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗಿದೆ ಎಂದು ಧಾರವಾಡ ಜಿಲ್ಲಾಡಳಿತ ಹೇಳಿತ್ತಿದ್ದರೂ, ರೈತರು ಮಾತ್ರ ಪರದಾಡುತ್ತಲೇ ಇದ್ದಾರೆ.
ಬಿತ್ತನೆ ಬೀಜ ಖರೀದಿಗಾಗಿ ರೈತರು ದಿನಗಟ್ಟಲೇ ರೈತ ಸಂಪರ್ಕ ಕೇಂದ್ರದ ಎದುರು ಕಾಯುವುದು ಮಾತ್ರ ತಪ್ಪುತ್ತಿಲ್ಲ.
ಇಲ್ಲಿನ ಹೊಸ್ ಬಸ್ ನಿಲ್ದಾಣ ಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ವತಿಯಿಂದ ದಿನಕ್ಕೆ ೨೦೦ ಜನರಿಗೆ ಬೀಜ ವಿತರಣೆ ಮಾಡಲಾಗುತ್ತಿದೆ.
ಅದೂ ಒಂದು ದಿನ ಮುಂಚಿತವಾಗಿ ಬಂದು ಚೀಟಿ ಪಡೆದವರಿಗೆ ಮಾತ್ರ ಬೀಜ ವಿತರಿಸಲಾಗುತ್ತಿದೆ.
ಇದೇ ಕಾರಣಕ್ಕಾಗಿ ಚೀಟಿ ಪಡೆಯಲು ರೈತರು ಮಂಗಳವಾರ ಬೆಳಗ್ಗೆ ೫ ಗಂಟೆಯಿಂದಲೇ ನೂರಾರು ರೈತರು ಕೇಂದ್ರದ ಎದುರು ಜಮಾಯಿಸಿದ್ದರು.
ಕೆಲ ರೈತರಿಗೆ ಚೀಟಿ ಸಿಗದ ಕಾರಣಕ್ಕೆ ರೊಚ್ಚಿಗೆದ್ದ ರೈತರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಲೇ, ಧಾರವಾಡದ ಮಲಪ್ರಭಾನಗರದಲ್ಲಿನ ಶಾಸಕ ಅಮೃತ ದೇಸಾಯಿ ಅವರ ನಿವಾಸಕ್ಕೆ ತೆರಳಿ ದಿಢೀರ್ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ದಿನಕ್ಕೆ ಇಂತಿಷ್ಟು ಜನರಿಗೆ ಬೀಜ ವಿತರಣೆ ಎಂದು ನಿಯಮ ಮಾಡಿರುವುದು ಸರಿಯಲ್ಲ. ಮುಂಗಾರು ಹಂಗಾಮಿನಲ್ಲಿ ಬೀಜ ಖರೀದಿಗಾಗಿ ಸಮಯ ವ್ಯರ್ಥ ಮಾಡುವಂತಾಗಿದೆ.
ಹೀಗಾಗಿ ಕೇಂದ್ರಕ್ಕೆ ಆಗಮಿಸಿದ ಎಲ್ಲ ರೈತರಿಗೂ ಬೀಜ ವಿತರಣೆ ಮಾಡುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತರು ತೆರಳಿದ್ದ ಸಂದರ್ಭದಲ್ಲಿ ಶಾಸಕರು ಮನೆಯಲ್ಲಿ ಇರದ ಮಾಹಿತಿ ಅರಿತ ರೈತರು, ಶಾಸಕರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟು ಹಿಡಿದಿದ್ದರು.
ನಂತರ ಅವರ ಆಪ್ತರು ಶಾಸಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ನೀಡಿದರು. ಬಳಿಕ ರೈತರೊಂದಿಗೆ ಮಾತನಾಡಿದ ಶಾಸಕರು ತ್ವರಿತವಾಗಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಬಳಿಕ ರೈತರು ಪಾವಸ್ ಆದರು.