ಧಾರವಾಡ prajakiran.com : ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ಸಲ್ಲಿಸಿದ ಪ್ರಮುಖ ೪ ಬೇಡಿಕೆಗಳ ಈಡೇರಿಕೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಭರವಸೆ ನೀಡಿದರು.
ಗುರುವಾರ ನಗರಕ್ಕೆ ಆಗಮಿಸಿದ್ದ ಸಚಿವರಿಗೆ ಶಿಕ್ಷಣಾಧಿಕಾರಿಗಳ ಸಂಘದ ಪರವಾಗಿ ಮನವಿ ಅರ್ಪಿಸಲಾಯಿತು.
ಈಗಾಗಲೇ ಡಿ.ಪಿ.ಸಿ ಆಗಿರುವ ಶಿಕ್ಷಣ ಇಲಾಖೆಯ ಗ್ರುಪ್ ಬಿ ವೃಂದದ ಪತ್ರಾಂಕಿತ ಅಧಿಕಾರಿಗಳಿಗೆ ಪದೋನ್ನತಿ ನೀಡಿ ಶೀಘ್ರ ಸ್ಥಳ ನಿಯುಕ್ತಿಗೊಳಿಸುವದು.
ಸರ್ಕಾರದಿಂದ ರಚನೆಯಾಗಿರುವ ಹೊಸ ತಾಲೂಕುಗಳಿಗೆ ಶೀಘ್ರವೇ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಕಗೊಳಿಸಿ ಹೊಸ ರೇಂಜ್ಗಳು ಕಾರ್ಯೋನ್ಮುಖಗೊಳ್ಳಲು ಆದೇಶ ಮಾಡುವುದು.
ಈಗಾಗಲೇ ಪ್ರತಿ ತಾಲೂಕಿನಲ್ಲಿರುವ ಕ್ಷೇತ್ರ ಸಂಪನ್ಮೂಲ ಕೇಂದ್ರ (ಬಿ.ಆರ್.ಸಿ) ಗಳನ್ನು ಮೇಲ್ದರ್ಜೆಗೆ ಏರಿಸಿ ಅಲ್ಲಿ ಬಿ.ಇ.ಓ./ಶಿಕ್ಷಣಾಧಿಕಾರಿ ತತ್ಸಮಾನ ಹುದ್ದೆಯನ್ನು ಮಂಜೂರು ಮಾಡುವುದು.
ಪ್ರತಿ ತಾಲೂಕಿನಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಬಲಪಡಿಸುವ ಸಲುವಾಗಿ ಗ್ರುಪ್-ಬಿ ವೃಂದದ ಒಂದು ಕಲಾ ಮತ್ತೊಂದು ವಿಜ್ಞಾನ ವಿಷಯ ಪರಿವೀಕ್ಷಕರ ಹುದ್ದೆಯನ್ನು ಮಂಜೂರು ಮಾಡುವ ಕುರಿತು ಪ್ರಮುಖ ೪ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತರಲಾಯಿತು.
ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎನ್. ನಂದನ, ಪ್ರಧಾನ ಕಾರ್ಯದರ್ಶಿ ಎ.ಎಂ. ಹಿರೇಕುಂಬಿ, ಶಿಕ್ಷಣಾಧಿಕಾರಿಗಳಾದ ಎ.ಎ. ಖಾಜಿ, ಉಮೇಶ ಬಮ್ಮಕ್ಕನವರ, ವಿದ್ಯಾ ನಾಡಿಗೇರ, ರವಿಕುಮಾರ ಬಾರಾಟಕ್ಕೆ, ಎಚ್.ಎಚ್. ಮೇಟಿ, ಮಹಾದೇವಿ ಮಾಡಲಗೇರಿ, ಶಾಂತಾ ಮೀಸಿ, ಎಂ.ವ್ಹಿ. ಅಡವೇರ, ಮಹಾವೀರ ಹಂಚಿನಾಳ ಇತರರು ಇದ್ದರು.