ಧಾರವಾಡ prajakiran.com: ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಧಾರವಾಡ ಜಿಲ್ಲೆಯಲ್ಲಿನ ೭ ವಿಧಾನಸಭಾ ಮತಕ್ಷೇತ್ರಗಳ ಮತದಾರರ ಯಾದಿಯ ವಿಶೇಷ ಪರಿಷ್ಕರಣೆ–೨೦೨೧ ನೇದ್ದಕ್ಕೆ ಸಂಬಂಧಿಸಿದಂತೆ ಅರ್ಹತಾ ದಿನಾಂಕ : ೦೧–೦೧–೨೦೨೧ ಕ್ಕೆ ಇದ್ದಂತೆ ದಿನಾಂಕ:೧೮–೧೧–೨೦೨೦ ರಂದು ಕರಡು ಮತದಾರರ ಯಾದಿಯನ್ನು ಜಿಲ್ಲೆಯಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಸದರಿ ಕರಡು ಮತದಾರರ ಯಾದಿಯನ್ನು ಜಿಲ್ಲೆಯ ಎಲ್ಲ ಚುನಾವಣೆ ಶಾಖೆಗಳು, ತಹಶೀಲ್ದಾರ ಕಛೇರಿಗಳು ಮತ್ತು ಗ್ರಾಮ ಠಾಣಾಗಳಲ್ಲಿ ನವೆಂಬರ್ ೧೮, ೨೦೨೦ ರಂದು ಪ್ರಕಟಿಸಿದ್ದು, ಸಾರ್ವಜನಿಕರು ಮತದಾರರ ಯಾದಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ತೆಗೆದುಹಾಕುವಿಕೆ, ಸ್ಥಳಾಂತರಕ್ಕಾಗಿ ಮತ್ತು ಆಕ್ಷೇಪಣೆಗಳು ಇದ್ದಲ್ಲಿ ನಿಗದಿತ ನಮೂನೆಗಳನ್ನು ಭರಿಸಿ ಸಲ್ಲಿಸಬಹುದಾಗಿದೆ.
ಹೆಸರು ಸೇರ್ಪಡೆಗೆ ನಮೂನೆ–೬, ಹೆಸರು ತೆಗೆದುಹಾಕುವಿಕೆಗೆ ನಮೂನೆ–೭, ತಿದ್ದುಪಡೆಗೆ ನಮೂನೆ–೮, ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ವಿಳಾಸ ಬದಲಾವಣೆಗೆ ನಮೂನೆ–೮ಎ ನೇದ್ದನ್ನು ಭರ್ತಿಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.
ಸಾರ್ವಜನಿಕರು ದಿನಾಂಕ : ೧೮–೧೧–೨೦೨೦ ರಿಂದ ೧೭–೧೨–೨೦೨೦ ರವರೆಗೆ ಈಗಿರುವ ಕರಡು ಮತದಾರರ ಯಾದಿಯಲ್ಲಿ ಆಕ್ಷೇಪಣೆ ಸಲ್ಲಿಸಲು ನವೆಂಬರ್ ೧೮ ರಿಂದ ಡಿಸೆಂಬರ್ ೧೭, ೨೦೨೦ ರವರೆಗೆ ಆವಕಾಶವಿದ್ದು, ಸದರಿ ಅವಧಿಯಲ್ಲಿ ಸ್ವೀಕರಿಸಿದ ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ದಿನಾಂಕ :೦೭–೦೧–೨೦೨೧ ರಂದು ವಿಲೇವಾರಿಗೊಳಿಸಲಾಗುವುದು.
ನಂತರ ಮತದಾರ ಯಾದಿಯ ಪುರವಣಿ ಪಟ್ಟಿಯನ್ನು ದಿನಾಂಕ :೧೪–೦೧–೨೦೨೧ ರಂದು ತಯಾರಿಸಿ, ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ :೧೮–೦೧–೨೦೨೧ ರಂದು ಪ್ರಕಟಗೊಳಿಸಲಾಗುವುದು.
ಸಾರ್ವಜನಿಕರು ಮತ್ತು ಅರ್ಹ ಮತದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ.