ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿಕೆ
ಧಾರವಾಡ prajakiran.com : ಕೆಪಿಎಂಇ ಕಾಯ್ದೆಯಡಿ ಜಿಲ್ಲೆಯಲ್ಲಿ ನೋಂದಾಯಿತವಾಗಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ಅನುಮತಿ ಪಡೆದ ಒಟ್ಟು ಬೆಡ್ಗಳ ಪೈಕಿ ಶೇ.50ರಷ್ಟು ಬೆಡ್ಗಳನ್ನು ಸರ್ಕಾರಕ್ಕೆ ಮೀಸಲಿಡಲು ಈಗಾಗಲೇ ಸರ್ಕಾರದಿಂದ ಆದೇಶವಾಗಿದೆ.
ಮತ್ತು ಈ ಆದೇಶ ಕುರಿತು ಎಲ್ಲ ಖಾಸಗಿ ಆಸ್ಪತ್ರೆಗಳ ಸಭೆ ಜರುಗಿಸಿ ಆದೇಶದ ಪ್ರತಿ ಮತ್ತು ಮಾಹಿತಿಯನ್ನು ನೀಡಲಾಗಿದೆ.
ಪ್ರತಿ ಆಸ್ಪತ್ರೆಯೊಂದಿಗೆ ಸಮನ್ವಯ ಸಾಧಿಸಿ ಕೋವಿಡ್ ಸೋಂಕಿತರ ಚಿಕಿತ್ಸೆಯನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾಡಳಿತದಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನವನ್ನು ಪಾಲಿಸದ, ರೆಫರೆಲ್ ನೀಡಿರುವ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸುವ, ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರ ಕುರಿತು ತಪ್ಪು ಮಾಹಿತಿ ನೀಡುವ ಹಾಗೂ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರ ನಿಗದಿಪಡಿಸಿ, ಪ್ರಕಟಿಸಿರುವ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುವ ಕುರಿತು ದೂರುಗಳು, ಮಾಹಿತಿ ಬಂದಲ್ಲಿ ಜಿಲ್ಲಾಡಳಿತವು ಈ ಕುರಿತು ಪರಿಶೀಲಿಸಿ, ಅಂತಹ ಆಸ್ಪತ್ರೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ ಹಾಗೂ ಭಾರತೀಯ ದಂಡ ಸಂಹಿತೆ ಕಲಂ 188 ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಆಸ್ಪತ್ರೆಗಳು ಜಿಲ್ಲಾ ಆರೋಗ್ಯ ಅಧಿಕಾರಿ ಅಥವಾ ಅವರಿಂದ ನೇಮಕಗೊಂಡ ಅಧಿಕಾರಿಯಿಂದ ಸರ್ಕಾರದ ರೆಫರಲ್ ಪಡೆದಿರುವ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಶೇ.50ರಷ್ಟು ಬೆಡ್ಗಳನ್ನು ಮೀಸಲಿಡುವುದು ಕಡ್ಡಾಯ.
ಉಳಿದ ಬೆಡ್ಗಳನ್ನು ಆಯಾ ಆಸ್ಪತ್ರೆಗಳು ನೇರವಾಗಿ ತಮ್ಮ ವಿವೇಚನೆ ಪ್ರಕಾರ ಚಿಕಿತ್ಸೆಗೆ ನೀಡಬಹುದು. ಇತ್ತೀಚಿನ ಆದೇಶದ ಪ್ರಕಾರ ಖಾಸಗಿ ಆಸ್ಪತ್ರೆಗಳು ಸಾರಿ (SARI) ಪ್ರಕರಣಗಳಿಗೂ ಎಬಿಎಆರ್ಕೆ ಯೋಜನೆಯ ಸೌಲಭ್ಯವನ್ನು ಪಡೆಯಬಹುದು.
ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ ಮಾಹಿತಿ ನಿರ್ವಹಿಸಲು ಹೆಲ್ಪ್ಲೈನ್ ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.