ಧಾರವಾಡ : ಅತಿವೃಷ್ಟಿಯಿಂದ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳು ಉಕ್ಕಿ ಹರಿದು ನೆರೆಹಾವಳಿ ಎದುರಿಸುವ ನವಲಗುಂದ ತಾಲೂಕಿನ ವಿವಿಧ ಹಳ್ಳಿಗಳು ಮತ್ತು ನಾಲೆಗಳ ಪ್ರದೇಶಗಳಿಗೆ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಇಂದು ಭೇಟಿ ನೀಡಿ ಅತಿವೃಷ್ಟಿ ನಿರ್ವಹಿಸಲು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು.
ಯಮನೂರು ಗ್ರಾಮದ ಬಳಿ ಬೆಣ್ಣೆಹಳ್ಳದಿಂದ ಉಂಟಾಗುವ ಪರಿಸ್ಥಿತಿ, ಅಮರಗೋಳ ಗ್ರಾಮದ ಬಳಿಯ ನರಗುಂದ ಸೇತುವೆ, ಗೊಬ್ಬರಗುಂಪಿ,ಅಳಗವಾಡಿ,ಹೆಬ್ಬಾಳ,ಜಾವೂರ, ಹನಸಿ, ಶಿರಕೋಳ ಗ್ರಾಮಗಳ ಸುತ್ತಮುತ್ತಲಿನ ಕೃಷಿ ಭೂಮಿ ಮತ್ತು ಹಳ್ಳ,ಕೊಳ್ಳಗಳನ್ನು ಖುದ್ದಾಗಿ ವೀಕ್ಷಿಸಿದರು.
ಹನಸಿ – ಶಿರಕೋಳ ಮಧ್ಯೆ ತುಪ್ಪರಿಹಳ್ಳದ ಹರಿವಿನಿಂದ ಹಾನಿಗೀಡಾಗಿರುವ ರಸ್ತೆಯನ್ನು ನೋಡಿದ ಜಿಲ್ಲಾಧಿಕಾರಿಗಳು ರಸ್ತೆ ದುರಸ್ತಿಗೆ ಅನುದಾನ ಲಭ್ಯವಿದ್ದು ಕೂಡಲೇ ಒದಗಿಸುವುದಾಗಿ ಹೇಳಿದರು.
ಸ್ಥಳೀಯ ಸ್ವಯಂ ಸೇವಕ ತಂಡದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿಗಳು, ಅತಿವೃಷ್ಟಿ ಸಂದರ್ಭದಲ್ಲಿ ತಕ್ಷಣ ಸ್ಥಳೀಯವಾಗಿ ಕೈಗೊಳ್ಳಬಹುದಾದ ಕಾರ್ಯಗಳನ್ನು ವಿವರಿಸಿದರು. ಸ್ಥಳೀಯ ವಾಹನಗಳು, ಜೆಸಿಬಿ, ಈಜುಗಾರರ ಸಂಪರ್ಕ ಸಂಖ್ಯೆ ಎಲ್ಲರ ಬಳಿ ಇರಬೇಕು ಎಂದು ಸೂಚಿಸಿದರು.
ಕಳೆದ ಎರಡು ದಿನಗಳಿಂದ ಧಾರವಾಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಮುಖ ವಾಗಿದೆ. ಅಲ್ಲಲ್ಲಿ ಬಿಸಿಲು ಕೂಡ ಕಾಣಿಸಿಕೊಂಡಿದೆ. ಪ್ರವಾಹ ನಿಯಂತ್ರಣ ಮತ್ತು ಪರಿಹಾರ ಕಾರ್ಯಗಳಿಗೆ ೫ ಕೋಟಿ ರೂ.ಬಿಡುಗಡೆಯಾಗಿದೆ.
ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ.ಅತಿವೃಷ್ಟಿ ಬಾಧಿತವಾಗುವ ಜಿಲ್ಲೆಯ ೮೩ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಪ್ರವಾಹ ಎದುರಾದರೆ ಜನರ ಸ್ಥಳಾಂತರಕ್ಕೆ ಪರಿಹಾರ ಕೇಂದ್ರಗಳನ್ನು ಸಿದ್ಧತೆ ಮಾಡಲಾಗಿದೆ.ರಸ್ತೆಗಳನ್ನು ದುರಸ್ತಿ ಮಾಡಲಾಗುವುದು. ಭಾಗಶಃ ಮತ್ತು ಸಂಪೂರ್ಣ ಹಾನಿಯಾಗಿರುವ ಮನೆಗಳಿಗೆ ಪರಿಹಾರವನ್ನು ಒದಗಿಸಲು ಸರ್ಕಾರದಿಂದ ಹಣ ಬಿಡುಗಡೆಯಾಗಿದೆ.
ಜಿಲ್ಲಾಡಳಿತವು ಅದನ್ನು ಹಾನಿಗೀಡಾದವರನ್ನು ಗುರುತಿಸಿ ಅವರ ಖಾತೆಗೆ ಜಮೆ ಮಾಡಲಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಬೆಳೆ ಸಮೀಕ್ಷೆ ಚುರುಕುಗೊಳಿಸಿ ಹಾನಿಯ ಅಂದಾಜು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ನವಲಗುಂದ ತಾಲೂಕಿನಲ್ಲಿ ಸುಮಾರು ೪೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆಯಾಗಿದೆ.ಇದರಲ್ಲಿ ಸುಮಾರು ೩ ಸಾವಿರ ಹೆಕ್ಟೇರ್ ಕೃಷಿ ಬೆಳೆ ಅತಿವೃಷ್ಟಿಗೆ ಹಾನಿಯಾಗಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ವಿವರಿಸಿದರು.
ನಂತರ ಹನಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಪರಿಹಾರ ಕೇಂದ್ರ ಸ್ಥಾಪನೆಗೆ ಸಿದ್ಧತೆ ಮಾಡಿಕೊಂಡು, ಸ್ಥಳೀಯ ನೋಡಲ್ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಲು ಸೂಚಿಸಿದರು.