ರಾಜ್ಯ

ಕೋವಿಡ್ ಪರಿಹಾರದ ಷರತ್ತು ಸಡಿಲಿಸಲು ಸಿಎಂಗೆ ಪತ್ರ : ಉತ್ತರ ಪ್ರದೇಶ ಮಾದರಿ ಮಾರ್ಗಸೂಚಿಗೆ ಒತ್ತಾಯ

ಬೆಳಗಾವಿ prajakiran.com  : ಚುನಾವಣಾ ಕರ್ತವ್ಯದ ವೇಳೆ ಮೃತರಾದ ಸಿಬ್ಬಂದಿ ಕುಟುಂಬಕ್ಕೆ ಪರಿಹಾರ ವಿತರಿಸಲು ಸರ್ಕಾರ ಸೂಕ್ತ ಮಾರ್ಗಸೂಚಿ ರಚಿಸಬೇಕು ಎಂದು ಮೃತ ಶಿಕ್ಷಕರ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಮತದಾನ ಅಥವಾ ಮತ ಎಣಿಕೆ ಸಂದರ್ಭದಲ್ಲಿ ಸೋಂಕು ತಗುಲಿ, ಆನಂತರ ಮೃತಪಟ್ಟ ಚುನಾವಣಾ ಸಿಬ್ಬಂದಿಯ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಸ್ಪಷ್ಟ ಮಾರ್ಗಸೂಚಿಗಳಿಲ್ಲ.

ಹೀಗಾಗಿ ಉತ್ತರ ಪ್ರದೇಶ ಮಾದರಿಯಲ್ಲಿ ಚುನಾವಣಾ ಕಾರ್ಯದ ಅವಧಿ ವಿಸ್ತರಣೆ ಜತೆಗೆ ಷರತ್ತು ಸಡಿಲಗೊಳಿಸುವಂತೆ ಮೃತ ಶಿಕ್ಷಕರ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸೋಂಕಿಗೆ ಬಲಿಯಾದ ಶಿಕ್ಷಕಿಯ ಪತಿ, ರಾಮದುರ್ಗದ ಬಾಲಚಂದ್ರ ಜಾಬಶೆಟ್ಟಿ ಅವರು ಈ ಈ ವಿಷಯವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಮಾನವೀಯ ನೆಲೆಗಟ್ಟಿನಲ್ಲಿ ಸರ್ಕಾರದ ವತಿಯಿಂದ ರಾಜ್ಯ ಚುನಾವಣಾ ಆಯೋಗಕ್ಕೆ ಪರಿಹಾರ ನೀಡುವಂತೆ ಶಿಫಾರಸು ಮಾಡಬೇಕು ಎಂದು ಸಿಎಂಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.

ಈಗಿರುವ ಮಾರ್ಗಸೂಚಿಯಂತೆ ‘ರಾಜ್ಯದಲ್ಲಿ ಚುನಾವಣೆ ಘೋಷಣೆಯಾದಾಗಿನಿಂದ ಮತದಾನ, ಫಲಿತಾಂಶ ಹೀಗೆ ಇಡೀ ಪ್ರಕ್ರಿಯೆ ಮುಗಿಯುವರೆಗಿನ ಕಾಲ ಚುನಾವಣಾ ಕರ್ತವ್ಯದ ಅವಧಿಯೇ ಆಗಿರುತ್ತದೆ.

ಆದರೆ, ಪರಿಹಾರ ನೀಡಲು ವಿಧಿಸಿರುವ 7ನೇ ಷರತ್ತಿನ ಪ್ರಕಾರ ಮೂರ‌್ನಾಲ್ಕು ದಿನಗಳಿಗೆ ಮೀಸಲಾಗಿದೆ.

ಮನೆಯಿಂದ ತರಬೇತಿ ಕಚೇರಿಗೆ, ಮತಗಟ್ಟೆ ಹಾಗೂ ಮತ ಎಣಿಕೆ ಕೇಂದ್ರದಲ್ಲಿನ ಕರ್ತವ್ಯದ ಅವಧಿ ಹಾಗೂ ಅಲ್ಲಿಂದ ಮನೆಗೆ ಆಗಮಿಸುವ ಅವಧಿಯನ್ನಷ್ಟೇ ಪರಿಗಣಿಸಲಾಗಿದೆ.

ಆ ಬಳಿಕ ಕೋವಿಡ್‌ನಿಂದ ಸಾವು ಸಂಭವಿಸಿದ್ದಲ್ಲಿ ಪರಿಹಾರ ನೀಡಲು ಈಗಿನ ಮಾರ್ಗಸೂಚಿಯಂತೆ ಸಾಧ್ಯವಿಲ್ಲ.

ಉತ್ತರ ಪ್ರದೇಶದಲ್ಲಿ ಈಚೆಗೆ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಕರೊನಾ ಸೋಂಕಿಗೆ ಬಲಿಯಾದ ಸಿಬ್ಬಂದಿ ಕುಟುಂಬಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಚುನಾವಣಾ ಕಾರ್ಯದ ಅವಧಿ ಷರತ್ತು ಸೀಮಿತಗೊಳಿಸದೆ 30 ದಿಗಳಿಗೆ ವಿಸ್ತರಿಸಿ, ಮಾರ್ಗಸೂಚಿ ಮರು ವ್ಯಾಖ್ಯಾನಿಸಲಾಗಿದೆ.

ಅಲ್ಲದೆ, ಪ್ರತಿ ಕುಟುಂಬಕ್ಕೆ ತಲಾ 30 ಲಕ್ಷ ರೂ. ಎಕ್ಸ್‌ಗ್ರೇಷಿಯಾ ಪರಿಹಾರ ಧನ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿ, 606 ಕೋಟಿ ರೂ. ಬಿಡುಗಡೆಗೊಳಸಿದೆ.

ಅದೇ ಮಾರ್ಗಸೂಚಿಯನ್ನೇ ಕರ್ನಾಟಕದಲ್ಲೂ ಅಳವಡಿಸಿ ಎಂದು ಶಿಕ್ಷಕರ ಕುಟುಂಬಗಳು ಒತ್ತಾಯಿಸಿವೆ.

ಆಶ್ವಾಸನೆ ಹೊರತುಪಡಿಸಿ, ಪರಿಹಾರ ವಿತರಿಸುವುದಕ್ಕಾಗಿ ಯಾವುದೇ ಮಾರ್ಗಸೂಚಿಗಳಿಲ್ಲ.

ರಾಜ್ಯದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಿ ಸೋಂಕಿತರಾಗಿ, ವಾರಗಟ್ಟೆಲೆ ಚಿಕಿತ್ಸೆ ಪಡೆದರೂ ಗುಣಮುಖರಾಗದೇ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ವಿತರಿಸಲು ಸರ್ಕಾರ ಮುಂದಾಗಬೇಕು.
ಬಾಲಚಂದ್ರ ಜಾಬಶೆಟ್ಟಿ

-ಮೃತ ಶಿಕ್ಷಕಿಯ ಪತಿ, ಬೆಳಗಾವಿ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *