ಬೆಂಗಳೂರು/ ಬೆಳಗಾವಿ prajakiran.com : ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಕರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಅವರು ಕಳೆದ ಹಲವು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದರು.
ಆದರೆ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ, ಅವರ ವಕೀಲ ಶ್ಯಾಮಸುಂದರ್ ಅವರ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಅವರಿಗೆ ಎಸ್ ಐಟಿ ವಿಚಾರಣೆಗೆ ಹಾಜರಾಗುವಂತೆ ಎರಡೂ ಬಾರಿ ನೋಟಿಸ್ ನೀಡಿತ್ತು.
ಆದರೆ,ಅನಾರೋಗ್ಯದ ನೆಪವೊಡ್ಡಿ ಎಸ್ ಐ ಟಿ ವಿಚಾರಣೆಗೆ ಗೈರು ಹಾಜರಾಗಿದ್ದರು.
ಅಲ್ಲದೆ, ಮುಂದಿನ ದಿನಗಳಲ್ಲಿ ಹಾಜರಾಗಲು ಸಮಯಾವಕಾಶ ಕೋರಿದ್ದರು.
ಸೋಮವಾರ (ಇಂದು) ಎಸ್ ಐ ಟಿ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು.
ಇದೀಗ ಅವರಿಗೆ ಕರೋನಾ ಪಾಸಿಟಿವ್ ದೃಢಪಟ್ಟಿದ್ದು, ಬೆಳಗಾವಿ ಜಿಲ್ಲೆಯ ಗೋಕಾಕ್ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರ ಪರ ವಕೀಲ ಶ್ಯಾಮಸುಂದರ, ಆರೋಗ್ಯ ಕುರಿತು ಮಾಹಿತಿ ಕಲೆ ಹಾಕಿ ವಿಚಾರಣಾಧಿಕಾರಿಗಳಿಗೆ ನೀಡಲಾಗುತ್ತದೆ ಎಂದರು.
ಇದೇ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಕೂಡ ರಮೇಶ ಜಾರಕಿಹೊಳಿಗೆ ಕರೋನಾ ತಗುಲಿರುವುದು ಖಚಿತ ಪಡಿಸಿದ್ದಾರೆ.
ನಿನ್ನೆಯಷ್ಟೇ ಸಂತ್ರಸ್ತ್ರ ಯುವತಿ ಹಾಗೂ ಆಕೆಯ ಪರ ವಕೀಲ ಜಗದೀಶ್ ಅವರು ವಿಚಾರಣೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ.
ಆರೋಪಿಯನ್ನು ಓಡಾಡಲು ಬಿಟ್ಟು ದೂರುದಾರರನ್ನು ಆರೋಪಿ ತರಹ ವಿಚಾರಣೆ ನಡೆಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು.