ಅದಕ್ಕಾಗಿಯೇ ಕಾಂಗ್ರೆಸ್ ಗೆ ಉಂಟಾಯಿತು ಸೋಲು: ಬಸವರಾಜ ಬೊಮ್ಮಾಯಿ*
ಹಾನಗಲ್ : (ಬಮ್ಮನಹಳ್ಳಿ) prajakiran.com : ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಘೋಷಣೆ ಮಾಡಿದ ಭಾಗ್ಯಗಳು ಜನರ ಮನೆ ಬಾಗಿಲಿಗೆ ತಲುಪದೇ ಮಧ್ಯವರ್ತಿಗಳ ಪಾಲಾದವು. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನ ತಿರಸ್ಕರಿಸಿ ಪ್ರತಿ ಪಕ್ಷದಲ್ಲಿ ಕೂರಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವನ ಬೊಮ್ಮಾಯಿ ವಾಕ್ಸಮರ ನಡೆಸಿದರು.
ಶುಕ್ರವಾರ ಅವರು ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅನ್ನಭಾಗ್ಯ ಯೋಜನೆ ಜಾರಿ ಮಾಡಿದ ನಂತರವೇ ಜನ ಅಕ್ಕಿ ನೋಡಿದ್ದಾರೆ ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾರೆ.
ಈ ಅಕ್ಕಿಯಲ್ಲಿ ಕೇಂದ್ರದ ಪಾಲು ಹೆಚ್ಚು. ರಾಜ್ಯ ಸರ್ಕಾರದ ಪಾಲು ಪ್ರತಿ ಕೆಜಿಗೆ ಕೇವಲ ೩ ರೂಪಾಯಿ. ಆದರೆ ಅನ್ನಭಾಗ್ಯ ಯೋಜನೆ ತಮ್ಮದೆಂದು ಹೇಳಿಕೊಳ್ಳುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಸರ್ಕಾರ ರೈತರ ಪರವಾಗಿರಲಿಲ್ಲ, ರೈತರನ್ನು ಉದ್ಧಾರ ಮಾಡುವ ಮನಸ್ಥಿತಿ ಅವರಿಗಿಲ್ಲ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುವುದೇ ಕಾಂಗ್ರೆಸ್ ಕೆಲಸ ಎಂದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ನವರು ಈ ಹಿಂದೆ ಗೆದ್ದಾಗಲೆಲ್ಲ ಸಂಘಟನೆಯಿಂದ ಗೆದ್ದಿದ್ದೇವೆ ಎಂದು ಬೀಗುತ್ತಿದ್ದರು.
ಅದೇ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಉಪಚುನಾವಣೆಯಲ್ಲಿ ಜಯಗಳಿಸಿದರೆ ಅದು ಹಣದಿಂದ ಎಂದು ಡಿಕೆ ಶಿವಕುಮಾರ್ ಆರೋಪಿಸುತ್ತಾರೆ.
ಡಿ ಕೆ ಶಿವಕುಮಾರ್ ಹತಾಶ ರಾಗಿದ್ದಾರೆ.
ಸೋಲಿನ ಭಯದಿಂದ ಈ ತರಹದ ಮಾತುಗಳನ್ನು ಆಡುತ್ತಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಜನಶಕ್ತಿ ನಮ್ಮೊಂದಿಗಿದೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗೆ ಗೆಲುವು ಖಚಿತ ಇದೇ ಕಾರಣಕ್ಕಾಗಿ ಗಾಬರಿಯಿಂದ ಕಾಂಗ್ರೆಸ್ ಪಕ್ಷದವರು ಮಾತನಾಡುತ್ತಿದ್ದಾರೆ ಎಂದರು.
ವಿರೋಧ ಪಕ್ಷದ ಎಲ್ಲ ಟೀಕೆ-ಟಿಪ್ಪಣಿಗಳಿಗೆ ನಾನು ಉತ್ತರಕೊಡಲು ಬಯಸುವುದಿಲ್ಲ, ನಮ್ಮ ಮೂಲಮಂತ್ರ ಅಭಿವೃದ್ಧಿಯಾಗಿದ್ದು ಕಾಂಗ್ರೆಸ್ ಪಕ್ಷದವರು ತಮಗೆ ಬೇಕಾದ ಅಜೆಂಡಾ ಇಟ್ಟುಕೊಳ್ಳಲಿ
ಆದರೆ ಭಾರತೀಯ ಜನತಾ ಪಕ್ಷದ ಏಕೈಕ ಅಜೆಂಡಾ ಅಭಿವೃದ್ಧಿ. ಕಾಂಗ್ರೆಸ್ ಪಕ್ಷ ಮಾಡುವಂತಹ ಎಲ್ಲ ಟೀಕೆಗಳಿಗೆ ಹಾನಗಲ್ ಕ್ಷೇತ್ರದ ಉತ್ತರ ಕೊಡಲಿದ್ದಾರೆ ಎಂದು ಅವರು ನುಡಿದರು.
ಹಾನಗಲ್ ಉಪಚುನಾವಣೆ ಪ್ರಚಾರಕ್ಕೆ ಯಡಿಯೂರಪ್ಪ ಅವರು ಕಾಲಿಟ್ಟಿದ್ದಾರೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಬೊಮ್ಮಾಯಿಯವರು ಉಚ್ಚರಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪನವರು ಪರಿಚಯಿಸಿದ ಎಲ್ಲಾ ಯೋಜನೆಗಳ ಹಿಂದೆ ಬಲವಾದ ಸಾಮಾಜಿಕ ಅಭಿವೃದ್ಧಿಗೆ ಕಳಕಳಿ ಮತ್ತು ಕಾಳಜಿ ಇತ್ತು ಎಂದು ಬೊಮ್ಮಾಯಿ ಅವರು ಹಾನಗಲ್ ಪ್ರಚಾರದ ಸಂದರ್ಭದಲ್ಲಿ ಹೇಳಿದರು.
ಭಾರತೀಯ ಜನತಾ ಪಕ್ಷದ ಸರ್ಕಾರವಿದ್ದಾಗ ಜನಪರ ಕಾಳಜಿ ಹೆಚ್ಚಿತ್ತು ಜನರಿಗೆ ಅಗತ್ಯದ ಯೋಜನೆಗಳು ಸರಕಾರ ರೂಪಿಸಿತು.
ಅಲ್ಲದೆ ಮನೆಗೆ ತಲುಪುವಂತೆ ನೋಡಿಕೊಂಡಿತು. ಹೆಣ್ಣು ಮಕ್ಕಳು ಹುಟ್ಟಿದರೆ ಶಾಪ ಅನ್ನುವಂತಹ ಕಾಲದಲ್ಲಿ ಯಡಿಯೂರಪ್ಪನವರು ಭಾಗ್ಯಲಕ್ಷ್ಮಿ ಯೋಜನೆಯನ್ನು ಪರಿಚಯಿಸಿದರು
ಇಡೀ ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಯೋಜನೆಯನ್ನು ಪರಿಚಯಿಸಿದ ಹೆಮ್ಮೆ ಭಾರತೀಯ ಜನತಾ ಪಕ್ಷದ ಸರ್ಕಾರದ್ದು ಎಂದು ಅವರು ಹೇಳಿದರು,
ನಮ್ಮ ರೈತರು ಅಭಿವೃದ್ಧಿ ಹೊಂದಬೇಕು ಹಣ ಗಳಿಸಬೇಕು ಕಾಲಿನಲ್ಲಿ ಜೂರ್ಕಿ ಚಪ್ಪಲಿ, ರೇಷ್ಮೆ ಜುಬ್ಬಾ ಹಾಕಬೇಕು,
ರೇಷ್ಮೆ ರುಮಾಲು ಹಾಕಬೇಕು, ಕೈಯಲ್ಲಿ ಬಾರಕೋಲು ಹಿಡಿದುಕೊಳ್ಳಬೇಕು ಇದು ಭಾರತೀಯ ಜನತಾ ಪಕ್ಷದ ಅಭಿವೃದ್ಧಿಯ ಕನಸು. ರೈತ ಜೀವನ ಸುಧಾರಿಸುವುದೇ ನಮ್ಮ ಉದ್ದೇಶ, ರೈತನ ಬಾಳು ಆಗಬೇಕು ಎಂದು ಹೇಳಿದರು.