ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಅದರಲ್ಲೂ ಕರೋನಾ ಸೇನಾನಿಗಳಿಗೆ ಬೆಂಬಿಡದೆ ಕಾಡುತ್ತಿರುವುದು ಜಿಲ್ಲೆಯ ಜನತೆಯನ್ನು ಆತಂಕಕ್ಕೆ ಸಿಲುಕಿಸುತ್ತಲೇ ಇದೆ.
ಧಾರವಾಡದ ನಾರಾಯಣಪುರದ ಒಬ್ಬ ಮಕ್ಕಳ ತಜ್ಞವೈದ್ಯ ಕರೋನಾ ಸೋಂಕಿನಿಂದ ಗುಣಮುಖರಾದ ಬೆನ್ನಲ್ಲೇ ಮತ್ತೋಬ್ಬ ಮಕ್ಕಳ ತಜ್ಞ ಹಿರಿಯ ವೈದ್ಯರಿಗೂ ಕರೋನಾ ಹರಡಿದೆ.
ಮೊದಲಿಗೆ ಅವರ ಪತ್ನಿಗೆ ವಕ್ಕರಿಸಿದ್ದ ಮಹಾಮಾರಿ ಕರೋನಾ ಸೋಂಕು ಅವರಿಂದ ಪತಿ ಹಾಗೂ ಮಕ್ಕಳ ತಜ್ಞರಾಗಿರುವ ಹಿರಿಯ ವೈದ್ಯರಿಗೆ ಬಂದಿದೆ.
ಇದರಿಂದಾಗಿ ಅವರ ಕುಟುಂಬ ವರ್ಗ ಕೆಲ ಕಾಲ ಆತಂಕಕ್ಕೆ ಸಿಲುಕಿತ್ತು. ಆದರೆ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತದಿಂದ ಯಾರಿಗೂ ಸೋಂಕು ಹರಡಿಲ್ಲ. ಅವರ ಮಗ, ಸೋಸೆ ವರದಿ ನೆಗೆಟಿವ್ ಬಂದಿರುವುದು ಸಮಾಧಾನದ ಸಂಗತಿಯಾಗಿದೆ.
ಮಕ್ಕಳ ತಜ್ಞ ವೈದ್ಯರು ಹಾಗೂ ಅವರ ಪತ್ನಿ ಕೋವಿಡ್ ನಿಯಮಾನುಸಾರ ಹೋಂ ಐಸೋಲೇಶನ್ ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆದರೂ ಮುಂಜಾಗ್ರತ ಕ್ರಮವಾಗಿ ಅವರ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ನರ್ಸ್ ಗಳಿಗೆ ಕ್ವಾರಂಟಿನ್ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರಜಾಕಿರಣ.ಕಾಮ್ ಗೆ ಖಚಿತ ಪಡಿಸಿದ್ದಾರೆ.
ಕೋವಿಡ್ ನಿಯಮಾನುಸಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವರ ಮನೆಯನ್ನು ಸೀಲ್ ಡೌನ್ ಮಾಡಿದ್ದು, ಅವರ ಆಸ್ಪತ್ರೆ ಅಕ್ಕಪಕ್ಕದಲ್ಲಿದ್ದ ಹೋಟೆಲ್, ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಅಲ್ಲದೆ, ಪ್ರತಿ ದಿನ ನಿಗಾವಹಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಒಟ್ಟಾರೆ ಪೊಲೀಸ್, ಆರೋಗ್ಯ ಇಲಾಖೆ, ಪತ್ರಕರ್ತರು, ಮಹಾನಗರ ಪಾಲಿಕೆ, ವೈದ್ಯರನ್ನು ಬಿಡದೆ ಎಲ್ಲರನ್ನೂ ಕರೋನಾ ಕಾಡುತ್ತಿರುವುದು ಧಾರವಾಡ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳುವಂತೆಮಾಡಿದೆ.