ಬೆಂಗಳೂರು prajakiran.com ಜೂನ್ 20 :
ಬಸವಣ್ಣನವರ ಕುರಿತ ಪಾಠದಲ್ಲಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯಷ್ಟೇ ಅಲ್ಲ; ಇದಕ್ಕೂ ಹಿಂದಿನ ಪ್ರೊ. ಬರಗೂರು ರಾಮಚಂದ್ರಪ್ಪ ಸಮಿತಿ ಹಾಗೂ ಪ್ರೊ. ಮುಡಂಬಡಿತ್ತಾಯ ಅಧ್ಯಕ್ಷತೆಯ ಸಮಿತಿಗಳು ರೂಪಿಸಿರುವ ಪಾಠದಲ್ಲಿಯೂ ದೋಷಗಳಿದ್ದವು ಎಂದು ಸಾಣೇಹಳ್ಳಿಯ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸಾಣೆಹಳ್ಳಿ ಸ್ವಾಮೀಜಿಯವರು, “ಶ್ರೀ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪರಿಷ್ಕರಣಾ ಸಮಿತಿಯವರು ಹೊರ ತಂದಿರುವ 9ನೇ ತರಗತಿಯ ‘ಸಮಾಜ ವಿಜ್ಞಾನ ಭಾಗ 1’ ಪಠ್ಯದಲ್ಲಿ ಬಸವಣ್ಣನವರ ಬಗೆಗಿನ ಪಾಠದಲ್ಲಿ ಸಾಕಷ್ಟು ದೋಷಗಳಿವೆ.
ಇವರಿಗಿಂತ ಹಿಂದೆ ಪ್ರೊ. ಬರಗೂರು ರಾಮಚಂದ್ರಪ್ಪನವರು ಮತ್ತು ಪ್ರೊ. ಜಿ.ಎಸ್. ಮುಡಂಬಡಿತ್ತಾಯ ಅವರು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿದ್ದರು.
ಮುಡಂಬಡಿತ್ತಾಯ ಅವರ ಅಧ್ಯಕ್ಷತೆಯ ಪಠ್ಯ ರಚನಾ ಸಮಿತಿಯವರು ಬಸವೇಶ್ವರ ೆನ್ನುವ ಪಾಠದಲ್ಲಿ ಇತಿಹಾಸಕ್ಕೆ ಪೂರಕವಲ್ಲದ ಬಸವತತ್ವಕ್ಕೆ ಅಪಚಾರ ಮಾಡುವ ವಿಷಯಗಳನ್ನೇ ಸೇರಿಸಿದ್ದರು.
ಶ್ರೀ ಬರಗೂರು ರಾಮಚಂದ್ರಪ್ಪ ನವರ ಸಮಿತಿಯವರು ಈ ಪಠ್ಯದಲ್ಲಿ ಸಾಕಷ್ಟು ಪರಿಷ್ಕಾರ ಮಾಡಿದ್ದರು. ಅವರ ಪಠ್ಯದಲ್ಲೂ ‘ವೀರಶೈವ ಸಿದ್ಧಾಂತವನ್ನು ಪ್ರಚುರಪಡಿಸಿದರು’
‘ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು’ ಎನ್ನುವ ದೋಷಗಳಿವೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಹಿಂದಿನ ಪಠ್ಯಗಳನ್ನು ಬಿಟ್ಟು ಹೊಸದಾಗಿ ಬರೆಸಿ ವಿದ್ಯಾರ್ಥಿಗಳಿಗೆ ಕೊಡುವುದು ಉತ್ತಮ.
ಈ ನೆಲೆಯಲ್ಲಿ ಎರಡು ಪಠ್ಯಗಳನ್ನು ಕಳಿಸಿದ್ದು, ಅವುಗಳನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಕೆಲದಿನಗಳ ಹಿಂದೆ ಧಾರವಾಡದಲ್ಲಿ ಸಭೆ ಸೇರಿ, ಈ ವಿಷಯದ ಕುರಿತು ಸಮಗ್ರವಾಗಿ ಚರ್ಚಿಸಿ, ಮುಖ್ಯಮಂತ್ರಿಗಳೊಂದಿಗೆ ಅಂದೇ ದೂರವಾಣಿ ಮೂಲಕ ಬಸವೇಶ್ವರರ ಕುರಿತ ಪಠ್ಯದಲ್ಲಿನ ದೋಷದ ಕುರಿತು ಗಮನ ಸೆಳೆದಿದ್ದರು.
ಆಗ ಬರಗೂರು ರಾಮಚಂದ್ರಪ್ಪನವರ ಪಠ್ಯವನ್ನೇ ಮುಂದುವರೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದರು.
ಆದರೆ ಅದರಲ್ಲೂ ದೋಷಗಳಿವೆ ಎಂದು ಮಠಾಧೀಶರು ಗಮನಕ್ಕೆ ತಂದಾಗ ಪಠ್ಯ ಹೇಗಿರಬೇಕೆಂದು ಬರೆದು ಕಳಿಹಿಸುವಂತೆ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.