ಬೆಳಗಾವಿ prajakiran.com : ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದಿವ್ಯಾಂಗ ಯುವತಿಯೊಬ್ಬಳ್ಳು ತನಗೆ ನ್ಯಾಯ ಕೊಡಿಸುವಂತೆ ಧರಣಿ ಕುಳಿತಿದ್ದಲ್ಲದೆ, ಜಿಲ್ಲಾಧಿಕಾರಿ ಎದುರು ಕಣ್ಣೀರು ಹಾಕಿದ್ದಾರೆ.
ಜಿಲ್ಲೆಯ ರಾಮದುರ್ಗ ತಹಸೀಲ್ದಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಂಗವಿಕಲ ಯುವತಿಯೊಬ್ಬರು, 5 ತಿಂಗಳು ಕೆಲಸ ಮಾಡಿದರೂ ತನಗೆ ಕೇವಲ 10 ಸಾವಿರ ರೂ. ಸಂಬಳ ನೀಡಲಾಗಿದೆ ಎಂದು ಗೋಳು ತೋಡಿಕೊಂಡಳು.
ಈ ಬಗ್ಗೆ ವಿಚಾರಿಸಲು ಹೋದರೆ ಈಗ ಕೆಲಸ ಬರಬೇಡ ಎನ್ನುತ್ತಿದ್ದಾರೆ. ಹೀಗಾಗಿ ತನಗೆ ನ್ಯಾಯ ಕೊಡಿ ಎಂದು ಅಳಲು ತೋಡಿಕೊಂಡಳು.
ಅಂಗವಿಕಲ ಯುವತಿ ಸಲೀಮಾ ತಹಸೀಲ್ದಾರ್ ಎಂಬಾಕೆಯೇ ಅನ್ಯಾಯಕ್ಕೊಳಗಾದವರು. ಇವರು ರಾಮದುರ್ಗ ತಹಸೀಲ್ದಾರರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.
ಈ ಯುವತಿಗೆ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಇದ್ದಾಗ ಅನುಕಂಪ ಆಧಾರದ ಮೇಲೆ ಕೆಲಸ ನೀಡಲಾಗಿತ್ತು. ಆದರೆ ಈಗ ಕೆಲಸ ಇಲ್ಲ, ಬರಬೇಡ ಎಂದು ಹೇಳಲಾಗಿದೆ.
ಕಳೆದ ಅಕ್ಟೋಬರ್ ದಿಂದ ಮಾರ್ಚ ತಿಂಗಳ ವರೆಗೂ ಕೆಲಸ ಮಾಡಿರುವೆ. ತಿಂಗಳಿಗೆ ಐದು ಸಾವಿರ ಸಂಬಳ ಎಂದು ಹೇಳಿ 5 ತಿಂಗಳು ಕೆಲಸ ಮಾಡಿಸಿಕೊಂಡು ಬರೀ 10 ಸಾವಿರ ನೀಡಿದ್ದಾರೆ.
ಈಗ ಮತ್ತೆ ಕೆಲಸಕ್ಕೆ ಹೋದ್ರೆ ತೆಗೆದುಕೊಳ್ಳುತ್ತಿಲ್ಲ ಎಂದು ಸಲೀಮಾ ತಹಸೀಲ್ದಾರ್ ದೂರಿದರು. ಆ ನಂತರ ಕೆಲಸ ಯಾವುದು ಖಾಲಿ ಇಲ್ಲ ಅಂತಿದ್ದಾರೆ ಎಂದು ಮಹಿಳೆ ಕಣ್ಣೀರು ಸುರಿಸಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಿಸುವೆ ಎಂದು ಮಹಿಳೆಗೆ ತಿಳಿಸಿ ಹೇಳಿದರು.
ಆದರೆ ಮಹಿಳೆ ಇಲ್ಲ ನನಗೆ ಈಗಲೇ ಸರಿಯಾದ ಕೆಲಸ ಬೇಕು, ಸಂಬಳ ಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ಇದರಿಂದ ಇರಿಸುಮುರುಸಾದ ಡಿಸಿ ಬೊಮ್ಮನಳ್ಳಿ, ನಾನು ಹೇಳಿದ್ದನ್ನು ಅರ್ಥ ಮಾಡಿಕೊಳ್ಳುವುದನ್ನು ಬಿಟ್ಟು ಹೀಗೆ ಮಾಡಿದ್ರೆ ಹೇಗೆ? ಎಂದು ಜಿಲ್ಲಾಧಿಕಾರಿ ಅಲ್ಲಿಂದ ಹೊರಟು ಹೋದರು.