ಧಾರವಾಡ prajakiran.com ಜ.06: ರಾಜ್ಯ ಸರ್ಕಾರವು ಜನೆವರಿ 4 ರಂದು ಹೊರಡಿಸಿರುವ ಆದೇಶದನ್ವಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 31 ನೊಂದಾಯಿತ ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಳೆ (ಜ.7)ಯಿಂದ ಶೇ.30 ರಷ್ಟು ಹಾಗೂ ಜನೆವರಿ 10 ರಿಂದ ಶೇ.50 ರಷ್ಟು ಬೆಡ್ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಕೋವಿಡ್ ಸೊಂಕಿತರ ಚಿಕಿತ್ಸೆಗಾಗಿ ಮೀಸಲಿಡುವಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.
ಈ ಕುರಿತು ಇಂದು ಸಂಜೆ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಆನಲೈನ ವೆಬೆಕ್ಸ್ ಮೂಲಕ ಸಭೆ (ವಿಡಿಯೋ ಸಂವಾದ) ಜರುಗಿಸಿ ಮಾತನಾಡಿದರು.
ಆಸ್ಪತ್ರೆಗಳು ಹೊಂದಿರುವ ಐಸಿಯು, ಎಚ್ಡಿಯು, ವೆಂಟಿಲೇಟರ್ ಮತ್ತು ಜನರಲ್ ಬೆಡ್ಗಳಲ್ಲಿ ನಾಳೆಯಿಂದ ಶೇ.30 ರಷ್ಟು ಹಾಗೂ ಜನೆವರಿ 10 ರಿಂದ ಶೇ.50 ರಷ್ಟು ಕೋವಿಡ್ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಗಾಗಿ ಕಡ್ಡಾಯವಾಗಿ ಮೀಸಲಿಡಬೇಕು.
ಈ ಕುರಿತು ಪರಿಶೀಲಿಸಲು ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡವನ್ನು ರಚಿಸಲಾಗುವುದು ಎಂದು ಅವರು ಹೇಳಿದರು.
ಕೋವಿಡ್ ಮೊದಲ ಮತ್ತು ಎರಡನೆಯ ಅಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಎಲ್ಲ ಆಸ್ಪತ್ರೆ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಉತ್ತಮ ಸಹಕಾರ ನೀಡಿದ್ದಾರೆ.
ಈ ಮೂರನೇಯ ಅಲೆ ಸಂದರ್ಭದಲ್ಲೂ ಎಲ್ಲ ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗಳ ಸಹಕಾರವನ್ನು ಜಿಲ್ಲಾಡಳಿತ ಬಯಸುತ್ತದೆ ಎಂದರು.
ರಾಜ್ಯದಲ್ಲಿ ಕೋವಿಡ್ ಎರಡನೇಯ ಅಲೆ ಸಂದರ್ಭದಲ್ಲಿ ಸೋಂಕಿತ ಪ್ರಕರಣಗಳ ದರ ಹತ್ತು ದಿನಗಳಿಗೊಮ್ಮೆ ಎರಡುಪ್ಪಟ್ಟು (ಡಬಲ್) ಹೆಚ್ಚಾಗುತ್ತಿತ್ತು.
ಆದರೆ ತಜ್ಞರು ತಿಳಿಸಿರುವಂತೆ ಈ ಮೂರನೇ ಅಲೆಯಲ್ಲಿ ಡಬ್ಲಿಂಗ್ ದರ ಎರಡರಿಂದ ಮೂರು ದಿನಗಳಾಗಿದೆ. ಈಗ ಸೋಂಕು ಬೇಗನೆ ವ್ಯಾಪಕವಾಗಿ ಹರಡುವುದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸಿ, ಸ್ಯಾನಿಟೈಸರ್ ಬಳಸಬೇಕು.
ಈ ಕುರಿತು ಎಲ್ಲ ಆಸ್ಪತ್ರೆ, ಔಷಧ ಅಂಗಡಿ ಹಾಗೂ ಇತರ ವ್ಯಾಪಾರಿ ಸ್ಥಳಗಳಲ್ಲಿ ಜಾಗೃತಿ ವಹಿಸಬೇಕೆಂದು ಅವರು ತಿಳಿಸಿದರು.
ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುವಾಗಿ ತಪ್ಪದೆ ಮಾಸ್ಕ ಧರಿಸಿ ಹೊಗುವಂತೆ ಜಾಗೃತಿ ವಹಿಸಬೇಕು
ಮತ್ತು ಮಕ್ಕಳು ಕಡ್ಡಾಯವಾಗಿ ಮಾಸ್ಕ ಧರಿಸಿ ಸ್ಯಾನಿಟೈಜರ್ ಬಳಸುವಂತೆ ನಿಗಾವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ, ಆರ್ಸಿಎಚ್ಓ ಅಧಿಕಾರಿ ಡಾ. ಎಸ್.ಎಂ.ಹೊನಕೆರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಕಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಂ.ನಿಂಬಣ್ಣವರ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಮಂಜುನಾಥ.ಎಸ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಮತ್ತು ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು, ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ವಿಡೀಯೊ ಸಂವಾದದ ಮೂಲಕ ಭಾಗವಹಿಸಿದ್ದರು.