ರಸ್ತೆ ದುರಸ್ತಿಗೆ ಆಟೋ ಸಂಘ ಒತ್ತಾಯ
ಹದಗೆಟ್ಟ ಹೊಸ ಬಸ್ ನಿಲ್ದಾಣ ರಸ್ತೆ : ಜನರ ಪರದಾಟ
ಗದಗ prajakiran.com : ಜಿಲ್ಲಾ ಕೇಂದ್ರವಾದ ಗದಗನ ಹೊಸ ಬಸ್ ನಿಲ್ದಾಣದ ಮುಖ್ಯರಸ್ತೆಗಳಲ್ಲಿ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಆದರೂ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸದೇ ಮೌನ ವಹಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ಜೈ ಭೀಮ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮಂಗಳವಾರ ಸಂಜೆ ಬಸ್ ನಿಲ್ದಾಣ ಎದುರು ಪ್ರತಿಭಟನೆ ನಡೆಸಿದರು.
ನಗರದ ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಅಂಬೇಡ್ಕರ್ ವೃತ್ತದಿಂದ ಹಳೆ ಕೋರ್ಟ್ ವರೆಗೂ ಸುಮಾರು ೩ ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ರಸ್ತೆಗಳಲ್ಲಿ ಆಟೋ,ದ್ವಿಚಕ್ರ ವಾಹನ, ಸಾವಿರಾರು ಸರಕು ಸಾಗಣೆ, ಸಾರ್ವಜನಿಕ ಸಾರಿಗೆ ವಾಹನಗಳು ಸಂಚಾರ ಮಾಡುತ್ತಿವೆ. ಅನೇಕ ಕಡೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ವಾಹನ ಚಾಲಕರು ಪರದಾಡುವಂತಾಗಿವೆ.
ಜತೆಗೆ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿ ರಸ್ತೆಗಳು ಹಾಳಾಗಿವೆ. ಕೆಲವು ಕಡೆ ಮಳೆಯ ನೀರಿನಿಂದ ಮಣ್ಣು ಕೊಚ್ಚಿ ಹೋಗಿದ್ದು ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೈ ಭೀಮ ಆಟೋ ಚಾಲಕರ ಮತ್ತು ಮಾಲೀಕರು ಸಂಘದ ಅಧ್ಯಕ್ಷ ವಿಜಯ ಕಲ್ಮನಿ ಮಾತನಾಡಿ, ಹೊಸ ಬಸ್ ನಿಲ್ದಾಣದ ರಸ್ತೆ ಗುಂಡಿಮಯವಾಗಿದ್ದು, ಗುಂಡಿಗಳನ್ನು ಮುಚ್ಚಿ ರಸ್ತೆಯನ್ನು ಸರಿಪಡಿಸುವಂತೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದರು.
ಕಳೆದ ಮೂರು ವರ್ಷಗಳಿಂದ ರಸ್ತೆ ಹದಗೆಟ್ಟಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಮತ್ತಷ್ಟು ಅಲ್ಲಲ್ಲಿ ಗುಂಡಿಗಳಾಗಿದೆ.
ಮಳೆಯಾದರಂತೂ ಸಮಸ್ಯೆ ಹೆಚ್ಚಾಗುತ್ತದೆ. ಆಟೋ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗುತ್ತದೆ.ಗುಣಮಟ್ಟದ ಕಾಮಗಾರಿ ಮಾಡಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದು ಕಿಡಿಕಾರಿದರು.
ಮಂಜುನಾಥ ಅಗಸಿಮನಿ, ಬಸವರಾಜ ಮನಗುಂಡಿ ಮಾತನಾಡಿ, ಪಾದಚಾರಿ ರಸ್ತೆಗಳಲ್ಲೂ ಗುಂಡಿಗಳು ಬಿದ್ದಿರುವುದರಿದ ಮಳೆ ಮಳೆ ಬಂದರೆ ಗುಂಡಿಗಳಲ್ಲಿ ನೀರು ನಿಂತು ವಾಹನಗಳು ಬಂದಾಗ ಗುಂಡಿಯಲ್ಲಿನ ನೀರು ಅಕ್ಕ ಪಕ್ಕದ ಅಂಗಡಿಗಳಿಗೆ ಸಿಡಿಯುತ್ತವೆ.
ರಸ್ತೆಯಲ್ಲಿನ ತಗ್ಗುಗಳಿಂದ ತಪ್ಪಿಸಿಕೊಳ್ಳಲು ರಸ್ತೆಯನ್ನೇ ಬಿಟ್ಟು ಓಡಾಡಬೇಕಾದ ಸ್ಥಿತಿ ಇದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ರಸ್ತೆಯಲ್ಲಿ ತಗ್ಗುಗಳು, ಗುಂಡಿಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ಗಂಗಾಧರ ಶ್ಯಾಗೋಟಿ, ಶ್ಯಾಮ ದೊಡ್ಡಮನಿ, ಎಲ್. ಶಿರಹಟ್ಟಿ, ನಾಗರಾಜ ಗುಳೇದಗುಡ್ಡ, ಶಿವರಾಜ ಹಡಗಲಿ, ರಫೀಕ ನವಲಗುಂದ, ನಾಗಪ್ಪ ಹರತಾಳ, ಮಹಾದೇವ ಚಲವಾದಿ, ಬಸು ಹುಲ್ಲೂರ, ಶಿವಕುಮಾರ ದಂಡಿನ, ರಾಜು ಮಕ್ಕಣ್ಣವರ, ಶಪೀ ಅತ್ತಾರ ಇದ್ದರು.