ಧಾರವಾಡ prajakiran. com : ತಾಲೂಕಿನ ಅಮ್ಮಿನಬಾವಿ ಗ್ರಾಮದ ಐತಿಹಾಸಿಕ ಪಂಚಗೃಹ ಹಿರೇಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಲೋಕಕಲ್ಯಾಣ ಸಂಕಲ್ಪದೊಂದಿಗೆ ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಜು.೨೯ ರಂದು ಆರಂಭಗೊಳ್ಳಲಿದ್ದು, ಆ. ೨೮ ರವರೆಗೆ ಜರುಗಲಿದೆ. ನಿತ್ಯ ಪ್ರಾತಃಕಾಲ ೮ ಗಂಟೆಗೆ ಮಠದ ಪ್ರಾಂಗಣದಲ್ಲಿ ಆರಂಭಗೊಳ್ಳುವ ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯಲ್ಲಿ ಭಕ್ತ ಸಮೂಹ ಪಾಲ್ಗೊಳ್ಳಬಹುದು.
ವಿಶೇಷ ಪೂಜೆ : ಶ್ರೀಮಠದ ಕರ್ತೃ ಗದ್ದುಗೆಗೆ ಹಾಗೂ ಕ್ಷೇತ್ರನಾಥ ಶ್ರೀವೀರಭದ್ರಸ್ವಾಮಿಗೆ ಪ್ರಾತಃಕಾಲದಲ್ಲಿ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿಯ ವಿಶೇಷ ಪೂಜೆ ನಡೆಯಲಿವೆ.
ಪ್ರವಚನ* : ಶ್ರಾವಣ ಮಾಸದ ಸಂದರ್ಭದಲ್ಲಿ ಒಂದು ತಿಂಗಳ ಕಾಲ ನಿತ್ಯ ರಾತ್ರಿ ೮ ಗಂಟೆಗೆ ಶಿವಶರಣಿ ಹೇಮರಡ್ಡಿ ಮಲ್ಲಮ್ಮನ ಪುರಾಣ ಪ್ರವಚನವು ನವಲಗುಂದ ತಾಲೂಕು ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ನಡೆಯಲಿದೆ. ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಪುರಾಣ ಪ್ರವಚನ ಉದ್ಘಾಟಿಸುವರು. ಸುಜಾತಾ ಆರಾಧ್ಯಮಠ ನಿತ್ಯ ಸಂಗೀತ ಸೇವೆ ಸಲ್ಲಿಸುವರು.
ಆದ್ದರಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕಾರ್ಯಕ್ರಮಗಳ ಸಂಚಾಲಕರು ಮನವಿ ಮಾಡಿದ್ದಾರೆ.