ಮನೆ ಪೂರ್ತಿಗೊಳಿಸದ ಗುತ್ತಿಗೆದಾರನಿಗೆ
7 ಲಕ್ಷ 50 ಸಾವಿರ ರೂಪಾಯಿ ದಂಡ
ಧಾರವಾಡ ಪ್ರಜಾಕಿರಣ.ಕಾಮ್ ಮಾ.6 : ಅಳ್ನಾವರ್ ನಿವಾಸಿಯಾದ ಶ್ರೀಮತಿ ರೇಣುಕಾ ಸುಣಗಾರ ಮನೆ ಕಟ್ಟಿಕೊಡುವಂತೆ ಖಾನ್ ಸಿವಿಲ್ ಕನ್ಸಲ್ ಟೆನ್ಸಿಯ ವಾಸಿಮ್ ಖಾನ್ ಪಠಾಣ ಜೊತೆ 2020 ನೇ ಇಸವಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದರು.
ಆ ಒಪ್ಪಂದದ ಪ್ರಕಾರ ದೂರುದಾರ ಪ್ರತಿ ಚದರ ಅಡಿಗೆ ರೂ.1,800/- ಗಳಂತೆ ಗುತ್ತಿಗೆದಾರನಿಗೆ ಕೊಡುವ ಕರಾರು ಇತ್ತು.
ದೂರುದಾರರು ಒಟ್ಟು 14 ಲಕ್ಷ 87 ಸಾವಿರಗೆ ಮನೆ ಕಟ್ಟುವ ಕುರಿತು ಎದುರುದಾರರಿಗೆ ಸಂದಾಯ ಮಾಡಿದ್ದರು.
ಸದರಿ ಗುತ್ತಿಗೆದಾರ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಿ ಮನೆಯ ಕಟ್ಟಡ ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದರು.
ಕಳಪೆ ಗುಣಮಟ್ಟದ ಸಾಮಗ್ರಿಯಿಂದ ಕಟ್ಟಿದ್ದರಿಂದ ಮನೆಯ ಸ್ಲ್ಯಾಬ್ನಲ್ಲಿ 7-8 ಕಡೆ ಲಿಕೇಜ್ ಆಗಿರುತ್ತದೆ ಹಾಗೂ ಮನೆಯ ಇಟ್ಟಿಗೆಗಳು ಸಹ ಕರಗಿ ಹೋಗಿರುತ್ತವೆ.
ಕಳಪೆ ಮನೆ ಕಾಮಗಾರಿಯಿಂದ ಮತ್ತು ಮನೆ ಕೆಲಸ ಪೂರ್ತಿಗೊಳಿಸದ್ದರಿಂದ ತನಗೆ ಆರ್ಥಿಕ ಹಾನಿ, ಮಾನಸಿಕ ತೊಂದರೆಯಾಗಿದೆ ಅಂತಾ ಹೇಳಿ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಗುತ್ತಿಗೆದಾರ ವಕೀಲರ ಮೂಲಕ ಹಾಜರಾಗಿ ನಾವು ಕಟ್ಟಡ ಕಾಮಗಾರಿಯಲ್ಲಿ ಅತ್ಯುತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಿದ್ದೇವೆ.
ದೂರುದಾರ ಇನ್ನೂ ರೂ.12 ಲಕ್ಷ ನಮಗೆ ಕೊಡುವುದಿದೆ ಕಾರಣ ತಮ್ಮಿಂದ ಯಾವುದೇ ಸೇವಾ ನ್ಯೂನ್ಯತೆ ಆಗಿಲ್ಲಾ ಅಂತಾ ಹೇಳಿ ಈ ದೂರನ್ನು ವಜಾ ಮಾಡುವಂತೆ ಕೋರಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ಕಟ್ಟಡದ ನಿರ್ಮಾಣ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಲಾಗಿದೆಯೋ ಅಥವಾ ಇಲ್ಲವೋ ಅನ್ನುವುದನ್ನು ತಿಳಿದುಕೊಳ್ಳಲು ಸ್ಥಳಿಯ ವಕೀಲರನ್ನು ಕೋರ್ಟ್ ಕಮೀಷನರ್ ಆಗಿ ನೇಮಿಸಲಾಗಿತ್ತು.
ಅವರು ಉಭಯತರ ಸಮಕ್ಷಮ ಸ್ಥಳ ಪರಿಶೀಲನೆ ಮಾಡಿ ಆಯೊಗಕ್ಕೆ ವರದಿ ಸಲ್ಲಿಸಿದ್ದರು.
ಅವರ ವರದಿ ಮತ್ತು ಉಭಯತರ ಹಾಜರು ಮಾಡಿದ ಸಾಕ್ಷಾಧಾರಗಳನ್ನು ಆಯೋಗವು ಪರಿಶೀಲಿಸಿತು.
ದೂರುದಾರ ಗುತ್ತಿಗೆದಾರನಿಗೆ ರೂ.14 ಲಕ್ಷ 87 ಸಾವಿರ ರೂ.ಸಂದಾಯ ಮಾಡಿದ್ದರೂ ಅವರು ಕಳಪೆ ಕಾಮಗಾರಿ ಮಾಡಿ ಕಟ್ಟಡದ ಕೆಲಸ ಪೂರ್ತಿಗೊಳಿಸದ್ದರಿಂದ ಗುತ್ತಿಗೆದಾರ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಅದಕ್ಕಾಗಿ ಗುತ್ತಿಗೆದಾರ ದೂರುದಾರಳಿಗೆ ಕೊಡಬೇಕಾದ ಹಣ, ಅವರಿಗೆ ಆಗಿರುವ ಅನಾನುಕೂಲ, ಮಾನಸಿಕ ತೊಂದರೆ ಹಾಗೂ ಪ್ರಕರಣದ ಖರ್ಚು ವೆಚ್ಚ ಅಂತಾ ಒಟ್ಟು 7 ಲಕ್ಷ 50 ಸಾವಿರ ರೂ.ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಆದೇಶಿಸಿದೆ.
ಒಂದು ತಿಂಗಳ ಒಳಗಾಗಿ ಗುತ್ತಿಗೆದಾರ ದೂರುದಾರರಿಗೆ ಸದರಿ ಹಣ ಕೊಡದಿದ್ದಲ್ಲಿ ತೀರ್ಪು ನೀಡಿದ ದಿನಾಂಕದಿಂದ 7 ಲಕ್ಷ 50 ಸಾವಿರ ರೂ. ಮೇಲೆ ಶೇ.8% ರಂತೆ ಬಡ್ಡಿ ಹಾಕಿ ಕೊಡಲು ಆಯೋಗ ತಿಳಿಸಿದೆ.