ಬೆಂಗಳೂರು prajakiran.com : ರಾಜ್ಯದಲ್ಲಿ ಭಾನುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಐದು ಜನ ಸಾವಿನ ಕದ ಬಡಿದಿದ್ದಾರೆ.
ಮತ್ತೆ ಹೊಸದಾಗಿ 176 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 7000ಕ್ಕೆ ಏರಿಕೆಯಾಗಿದೆ.
176 ಸೋಂಕಿತರಲ್ಲಿ, 88 ಜನ ಹೊರರಾಜ್ಯದಿಂದಲೇ ಬಂದವರಿಗೆ ಆಗಿದ್ದಾರೆ. 6 ಜನಅಂತರ್ ರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.
ಇಂದು ರಾಜ್ಯದಲ್ಲಿ312 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 3955 ಜನ ಗುಣಮುಖರಾಗಿದ್ದು, 2956 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 16 ಜನ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಭಾನುವಾರವೂ ಐದು ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 86ಕ್ಕೆ ಬಂದು ನಿಂತಿದೆ.
ಭಾನುವಾರ ಪತ್ತೆಯಾದ 176 ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ 42, ಯಾದಗಿರಿ 22, ಉಡುಪಿ 21, ಬೀದರ 20, ಕಲಬುರಗಿಯಲ್ಲಿ 13, ಧಾರವಾಡದಲ್ಲಿ 10 ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.
ಇನ್ನೂಳಿದಂತೆ ಬಳ್ಳಾರಿಯಲ್ಲಿ 8, ಕೋಲಾರದಲ್ಲಿ 7, ಉತ್ತರಕನ್ನಡದಲ್ಲಿ 6, ಮಂಡ್ಯ ಹಾಗೂ ದಕ್ಷಿಣಕನ್ನಡದಲ್ಲಿ 5, ಬಾಗಲಕೋಟೆ 4, ರಾಮನಗರ 3, ರಾಯಚೂರು ಹಾಗೂ ಶಿವಮೊಗ್ಗದಲ್ಲಿ 2, ಬೆಳಗಾವಿ, ಹಾಸನ, ವಿಜಯಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಹಾವೇರಿ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸಾವಿನ ರಣಕೇಕೆ ರಾಜ್ಯದಲ್ಲಿ ಭಾನುವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಮೂರುಜನ ಸಾವನ್ನಪ್ಪಿದ್ದಾರೆ. ಪಿ-6876 ನೇ ಸೋಂಕಿತ 57 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ.
ಪಿ-6882 ನೇ ಸೋಂಕಿತ 50 ವರ್ಷದ ಪುರುಷ ತಮಿಳುನಾಡಿನಿಂದ ಬಂದಿದ್ದ. ಈತ ಜ್ವರದಿಂದ ಬಳಲುತ್ತಿದ್ದ. ಪಿ-6901 60 ವರ್ಷದ ಮಹಿಳೆ, ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ.
ದಕ್ಷಿಣಕನ್ನಡದಲ್ಲಿ ಪಿ-6848 ನೇ ಸೋಂಕಿತ 24 ವರ್ಷದ ಯುವಕ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದಿದ್ದ. ಈತ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಇದೇ ವೇಳೆ ಬೀದರ ಜಿಲ್ಲೆಯಲ್ಲಿ 7000 ನೇ 76 ವರ್ಷದ ಸೋಂಕಿತ ವೃದ್ದ ಹೆಚ್ ಟಿ ಎನ್ ಎನ್ ನಿಂದ ಸಾವನ್ನಪ್ಪಿದ್ದಾರೆ. ಒಟ್ಟು ರಾಜ್ಯದಲ್ಲಿ ಭಾನುವಾರ ಐದು ಜನ ಸಾವನ್ನಪ್ಪಿದ್ದಾರೆ ಎಂದು ವಿವರಿಸಲಾಗಿದೆ.